ಎಸೆಸೆಲ್ಸಿ: ಕಳೆದ ಬಾರಿ 9ನೇ ಸ್ಥಾನದಲ್ಲಿದ್ದ ದಾವಣಗೆರೆ 17 ಸ್ಥಾನಕ್ಕೆ ಕುಸಿತ
ದಾವಣಗೆರೆ, ಆ.10: ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಬಾರಿ 9ನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆಯು, ಈ ಬಾರಿಯ ಫಲಿತಾಂಶದಲ್ಲಿ ಕುಸಿಯುವ ಮೂಲಕ 17 ಸ್ಥಾನಕ್ಕೆ ಇಳಿದಿದೆ.
ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಆಕಾಶ್ ಆರ್ 625 ಕ್ಕೆ 623 ಅಂಕ, ಹರಿಹರದ ಎಂಕೆಇಟಿ ಶಾಲೆಯ ವಿದ್ಯಾರ್ಥಿ ಅಭಿಷೇಕ ಕನ್ನಡ ಮಾಧ್ಯಮದಲ್ಲಿ 625 ಕ್ಕೆ 623 ಅಂಕ, ಅನುಭವ ಮಂಟಪ ಶಾಲೆಯ ಎಸ್.ಸಂಹಿತ, ಜ್ಞಾನಶ್ರೀ ಅವರು 625 ಅಂಕಗಳಿಗೆ 623 ಅಂಕ ಪಡೆದಿದ್ದಾರೆ.
ಅನುಭವ ಮಂಟಪ ಶಾಲೆಯ ಎಸ್.ಆರ್.ಸಂಜನಾ 622 ಅಂಕ, ಜಗಳೂರಿನ ಎನ್ಎಂಕೆ ಪ್ರೌಢಶಾಲೆಯ ಡಿ.ಕೆ.ಅಮಿತ್ 621 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ದಾವಣಗೆರೆಯ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ 7 ಜನ ಅಂಧ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿ.ಎನ್.ಮಂಜುಳ ಶೇ.87.68, ಜಿ.ಚಂದನ ಶೇ.80.96, ಜಿ.ಟಿ.ಕಿರಣ್ ಶೇ.98.56, ಎನ್.ಪಲ್ಲವಿ ಶೇ.81.92, ಆರ್.ಭೂಮಿಕಾ ಶೇ.80.69, ಆರ್.ವೀಣಾ ಶೇ.84.63, ಬಿ.ಎನ್.ಶಾರದಾ ಶೇ.86.4 ಅಂಕಗಳನ್ನು ಪಡೆದಿದ್ದಾರೆ ಎಂದು ಶಾಲೆಯ ಅಧೀಕ್ಷಕರು ತಿಳಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಹೊರವಲಯದ ಬಸಾಪುರ ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ಪಾಸಾಗಿದ್ದಾರೆ. ಈ ಶಾಲೆಯಲ್ಲಿ ಹಿಂದುಳಿದ ವರ್ಗದ ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು, ಶಾಲೆ ಆರಂಭವಾಗಿ ಒಂಭತ್ತು ವರ್ಷಗಳಲ್ಲಿ 4ನೇ ಬಾರಿ ನೂರಕ್ಕೆ ನೂರು ಫಲಿತಾಂಶ ಬಂದಿದೆ.