ಗಜಗಿರಿ ಬೆಟ್ಟ ದುರಂತ: ಪ್ರಧಾನ ಅರ್ಚಕರ ಮೃತದೇಹ ಪತ್ತೆ; ಉಳಿದವರಿಗಾಗಿ ಶೋಧ ಚುರುಕು
ಮಡಿಕೇರಿ, ಆ.11: ಮಹಾಮಳೆಯಿಂದ ಗಜಗಿರಿ ಬೆಟ್ಟ ಕುಸಿದು ಐವರು ನಾಪತ್ತೆಯಾಗಿದ್ದ ತಲಕಾವೇರಿ ಪ್ರದೇಶಲ್ಲಿ ಇಂದು ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಸಿಕ್ಕಿದೆ.
ಪ್ರಕೃತಿ ವಿಕೋಪ ನಿರ್ವಹಣಾ ತಂಡ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಡಿದಾದ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ ಸಂದರ್ಭ ಕೊಳೆತ ಸ್ಥಿತಿಯಲ್ಲಿ ಮೃತ ಶರೀರ ಪತ್ತೆಯಾಗಿದೆ.
ನಾರಾಯಣ ಆಚಾರ್ ಅವರ ಮನೆಯಿದ್ದ ಪ್ರದೇಶದಿಂದ 2.50 ಕಿ.ಮೀ ದೂರದಲ್ಲಿ ಶವ ಮಣ್ಣಿನಡಿ ಗೋಚರಿಸಿದ್ದು, ಜಡಿಮಳೆಯ ನಡುವೆಯೂ ಕಾರ್ಯಾಚರಣೆ ತಂಡ ಕಂದಕದಿಂದ ಶವವನ್ನು ಮೇಲೆ ತರುವಲ್ಲಿ ಯಶಸ್ವಿಯಾಯಿತು.
ಈ ನಡುವೆ ನಾರಾಯಣ ಆಚಾರ್ ಅವರಿಗೆ ಸೇರಿದ ಎರಡು ಕಾರು, ಒಂದು ಬೈಕ್ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಮಣ್ಣಿನಡಿ ಪತ್ತೆಯಾಯಿತಲ್ಲದೆ, ಸಾಕು ನಾಯಿಯ ಮೃತದೇಹ ಕೂಡ ಸಿಕ್ಕಿತು.
ಪ್ರತಿಕೂಲ ಹವಾಗುಣದ ಹಿನ್ನೆಲೆ ಸಂಜೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಧಾರಾಕಾರ ಮಳೆಯೊಂದಿಗೆ ಕೆಸರು ಮಿಶ್ರಿತ ನೀರು ಬೆಟ್ಟದ ಭಾಗದಿಂದ ಹರಿದು ಬರುತ್ತಿದ್ದುದರಿಂದ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ಆ.6 ರಂದು ಘಟನೆ ನಡೆದಿದ್ದು, 8 ರಂದು ನಾರಾಯಣ ಆಚಾರ್ ಅವರ ಸೋದರ ಆನಂದತೀರ್ಥ ಸ್ವಾಮಿಗಳ ಮೃತದೇಹ ಸಿಕ್ಕಿತ್ತು. ನಾಪತ್ತೆಯಾದ ಐವರಲ್ಲಿ ಇಬ್ಬರ ಶವ ದೊರೆತಂತಾಗಿದ್ದು, ನಾರಾಯಣ ಆಚಾರ್ ಅವರ ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ ಅವರುಗಳ ಪತ್ತೆ ಕಾರ್ಯ ಬುಧವಾರ ಮತ್ತೆ ಮುಂದುವರಿಯಲಿದೆ.
ನಾರಾಯಣ ಆಚಾರ್ ಹಾಗೂ ಪತ್ನಿ ಶಾಂತ ಅವರು ಮನೆಯ ಮೇಲಂತಸ್ತಿನಲ್ಲಿ ನಿದ್ರಿಸಿದ್ದರು. ಈ ಕಾರಣದಿಂದಲೇ ಬೆಟ್ಟ ಬಿದ್ದ ರಭಸಕ್ಕೆ ಎರಡೂವರೆ ಕಿ.ಮೀ ನಷ್ಟು ದೂರ ದೇಹ ಹಾರಿ ಹೋಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳದಲ್ಲೇ ಇದ್ದ ಸಚಿವರು
ರಾಜ್ಯ ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ವಯಸ್ಸಿನ ಹಂಗು ತೊರೆದು ಕಳೆದ ಐದು ದಿನಗಳಿಂದ ತಲಕಾವೇರಿ ಪ್ರದೇಶದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡರು. ಬೆಟ್ಟ ಕುಸಿದ ಕಡಿದಾದ ಪ್ರದೇಶದಲ್ಲಿ ಜಡಿಮಳೆಯ ನಡುವೆ ಸಂಚರಿಸಿ ಕಾರ್ಯಾಚರಣೆಯ ತಂಡಕ್ಕೆ ಅಗತ್ಯ ಸಲಹೆಗಳನ್ನು ನೀಡಿ ಧೈರ್ಯ ತುಂಬಿದರು. ಖುದ್ದು ಊಟ ಬಡಿಸಿ ಮತ್ತು ತಾವೂ ಸಿಬ್ಬಂದಿಗಳೊಂದಿಗೆ ಊಟ ಮಾಡಿ ಪ್ರೋತ್ಸಾಹ ನೀಡಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರುಗಳು ಕೂಡ ಜೊತೆಗೆ ಕಾರ್ಯ ನಿರ್ವಹಿಸಿದರು. ಪ್ರತಾಪ್ ಸಿಂಹ ಅವರು ಕೆಸರುಮಯ ಬೆಟ್ಟದಲ್ಲಿ ಕಾರ್ಯಾಚರಣೆಗೂ ಕೈಜೋಡಿಸಿದರು. ಇದಕ್ಕೂ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ವಿಶೆಷ ಪೂಜೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಬಗ್ಗೆ ಮೆಚ್ಚುಗೆ
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕುಸಿದ ಕೆಸರುಮಯ ಬೆಟ್ಟ, ಗುಡ್ಡಗಳನ್ನೇರಿ, ಇಳಿದು, ಅಪಾಯಕಾರಿ ಬಂಡೆಗಳ ನಡುವೆ ಸಂಚರಿಸಿ ಕಾರ್ಯಾಚರಣೆಯ ಸಿಬ್ಬಂದಿಗಳಿಗೆ ಸ್ಫೂರ್ತಿ ತುಂಬಿದರು. ಕಳೆದ ಆರು ದಿನಗಳಿಂದ ಧಾರಾಕಾರ ಮಳೆಯ ನಡುವೆ ಪರಿಶ್ರಮ ಪಡುತ್ತಿರುವ ಜಿಲ್ಲಾಧಿಕಾರಿ ಕಾರ್ಯ ವೈಖರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಕೂಡ ಕಾರ್ಯ ನಿರ್ವಹಿಸಿದರು.
ಭೂಸಮಾಧಿಯಾದ ಬೆನ್ನ ಹಿಂದೆಯೇ ಸಂಪತ್ತಿನ ಮಾತು
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರು ಗಜಗಿರಿ ಬೆಟ್ಟ ಕುಸಿದು ಮೃತಪಟ್ಟ ಬೆನ್ನಲ್ಲೇ ಅವರಲ್ಲಿ ಅಡಕವಾಗಿರುವ ಅಪಾರ ಸಂಪತ್ತಿನ ಬಗ್ಗೆ ಮಾತುಗಳು ಹರಿದಾಡಲಾರಂಭಿಸಿದೆ.
ಬೆಟ್ಟದ ಮಣ್ಣಿನಡಿ ಕೊಚ್ಚಿ ಹೋದ ನಾರಾಯಣ ಆಚಾರ್ ಅವರ ಮನೆಯಲ್ಲಿ ಅಧಿಕ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳು ಮತ್ತು ನಗದು ನಾಣ್ಯಗಳಿದ್ದವು. ಸುಮಾರು 30 ಕ್ವಿಂಟಾಲ್ ಕರಿಮೆಣಸು ಮತ್ತು ಐದು ಕ್ವಿಂಟಾಲ್ ಏಲಕ್ಕಿ ಇತ್ತು, ನೂರಾರು ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆಗಳಿದ್ದವು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಾಯಣ ಆಚಾರ್ ಅವರ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮತ್ತು ಕಾರು ಚಾಲಕರಾಗಿದ್ದ ಜಯಂತ್ ಅವರು ಭಾಗಮಂಡಲ ಭಾಗದಲ್ಲಿ ತೋಟ ಇರುವುದು ನಿಜ. ಹೆಚ್ಚಿನ ತೋಟ ಇರುವುದರಿಂದ ಏಲಕ್ಕಿ ಮತ್ತು ಕೆರಿಮೆಣಸು ದಾಸ್ತಾನು ಇಟ್ಟಿರಬಹುದು ಎಂದರು. ಆದರೆ ಚಿನ್ನಾಭರಣ, ನಗದು, ನಾಣ್ಯಗಳ ಬಗ್ಗೆ ನನಗೆ ತಿಳಿದಿಲ್ಲವೆಂದರು.
ಸ್ಥಿತಿವಂತರಾಗಿದ್ದರು
ನನಗೆ ಸಾಕಷ್ಟು ಸಿರಿವಂತಿಕೆ ಇದ್ದು, ಪೂಜೆ ಮಾಡುವ ಅಗತ್ಯವಿಲ್ಲ. ಆದರೆ ನೂರಾರು ವರ್ಷಗಳಿಂದ ಪೂರ್ವಿಕರು ಈ ಕಾಯಕವನ್ನು ಮಾಡಿಕೊಂಡು ಬಂದಿರುವುದರಿಂದ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಅಷ್ಟೇ ಎಂದು ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ನಾರಾಯಣ ಆಚಾರ್ ಅವರು ನನ್ನ ಬಳಿ ಅನುಭವ ಹಂಚಿಕೊಂಡಿದ್ದರು ಎಂದು ಕ್ಷೇತ್ರದ ದೇವತಕ್ಕರಾದ ಮೋಟಯ್ಯ ಅವರು ಹೇಳಿದರು.
ಸ್ಥಳಾಂತರಕ್ಕೆ ಸಿದ್ಧವಾಗಿದ್ದರು
ಆಗಸ್ಟ್ ಆರಂಭದಲ್ಲೇ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದ್ದಂತೆಯೇ ಮನೆಗಳ ಹಂಚುಗಳಿಗೆ ಹಾನಿಯಾಗುತ್ತಿತ್ತು. ಇವುಗಳನ್ನು ಸರಿ ಪಡಿಸುವ ಕಾರ್ಯದಲ್ಲಿ ಬೆಟ್ಟ ಕುಸಿದ ಒಂದು ದಿನದ ಹಿಂದೆ ತೊಡಗಿಸಿಕೊಂಡಿದ್ದೆವು. ಇನ್ನೆರಡು ದಿನಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವುದಾಗಿ ನಾರಾಯಣ ಆಚಾರ್ ಅವರು ಹೇಳಿಕೊಂಡಿದ್ದರು ಎಂದು ಚಾಲಕ ಜಯಂತ್ ತಿಳಿಸಿದರು.