ಎಸೆಸೆಲ್ಸಿ ಪರೀಕ್ಷೆ: ಸವಾಲು ದಾಟುವುದರಲ್ಲಿ ರಾಜ್ಯ ಯಶಸ್ಸು ಗಳಿಸಿದೆ- ನಳೀನ್ ಕುಮಾರ್ ಕಟೀಲು
ಬೆಂಗಳೂರು, ಆ. 11: ಕೋವಿಡ್ ಸಂಕಷ್ಟದ ಸಮಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ರಾಜ್ಯದ ವಿದ್ಯಾರ್ಥಿಗಳು ಧೈರ್ಯದಿಂದ ಎದುರಿಸಿದರ ಪರಿಣಾಮ ಉತ್ತಮ ಫಲಿತಾಂಶ ಬಂದಿದೆ. ಎಲ್ಲರಿಗೂ ಶುಭ ಹಾರೈಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ. ಸರಕಾರ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರಿಂದ ಮಕ್ಕಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಹಾಗೂ ಪರೀಕ್ಷಾ ಮಂಡಳಿ ಅಧಿಕಾರಿಗಳ ವೃತ್ತಿಪರತೆ, ಕರ್ತವ್ಯ ಪ್ರಜ್ಞೆ ಶ್ಲಾಘನೀಯ. ಸಮಯಕ್ಕೆ ಸರಿಯಾಗಿ ಮೌಲ್ಯಮಾಪನ ಮಾಡಿದ ಶಿಕ್ಷಕ ವರ್ಗವೂ ಅಭಿನಂದನೆಗೆ ಅರ್ಹರು. ಸೂಕ್ತ ಪೂರ್ವ ಸಿದ್ಧತೆ ಹಾಗೂ ಬದ್ಧತೆ ಕಾರಣದಿಂದ ಈ ಸವಾಲು ದಾಟುವುದರಲ್ಲಿ ರಾಜ್ಯ ಯಶಸ್ಸುಗಳಿಸಿದೆ ಎಂದು ಕಟೀಲು ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.