ಓಣಂ ಪ್ರಯುಕ್ತ ಕೇರಳಕ್ಕೆ ವಿಶೇಷ ಸಾರಿಗೆ ಸೇವೆ ಸೆ.8ರವರೆಗೆ ವಿಸ್ತರಣೆ
ಬೆಂಗಳೂರು, ಸೆ.3: ಕೆಎಸ್ಆರ್ಟಿಸಿ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಕೇರಳ ಪ್ರಯಾಣಿಕರ ಅನುಕೂಲಕ್ಕಾಗಿ ಕೇರಳ ರಾಜ್ಯಕ್ಕೆ ಕಲ್ಪಿಸಿದ್ದ ವಿಶೇಷ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಸೆ.8ರವರೆಗೆ ವಿಸ್ತರಿಸಲಾಗಿದೆ.
ಓಣಂ ಪ್ರಯುಕ್ತ ಕೇರಳ ಜನತೆಯ ಅನುಕೂಲಕ್ಕಾಗಿ ಆ.24ರಿಂದ ಸೆ.6ರವರೆಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ, ಪ್ರಯಾಣಿಕರ ಮನವಿಯ ಮೇರೆಗೆ ಈ ಸೇವೆಯನ್ನು ಸೆ.8ರವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಲಂ, ಕಾನ್ಹಂಗಾಡ್, ಕಾಸರಗೂಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ತ್ರಿಶೂರು, ತಿರುವನಂತಪುರಂ ಮತ್ತು ವಡಕರಾ ಹಾಗೂ ಸದರಿ ಸ್ಥಳಗಳಿಂದ ಬೆಂಗಳೂರಿಗೆ. ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂ ಹಾಗೂ ಸದರಿ ಸ್ಥಳಗಳಿಂದ ಮೈಸೂರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಖ್ಯ ಸೂಚನೆ: ಎಲ್ಲಾ ಪ್ರಯಾಣಿಕರು ಕೇರಳ ಸರಕಾರದ ಪೋರ್ಟಲ್ https://covid19jagratha.kerala.nic.in ನಲ್ಲಿ ಕಡ್ಡಾಯವಾಗಿ ನೋಂದಾಯಿಸಿ ಕೊಳ್ಳಬೇಕು. ಬಸ್ಸನ್ನು ಹತ್ತುವ ಮುಂಚೆ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿರುವ ಬಗ್ಗೆ ಪುರಾವೆಯನ್ನು ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ತೋರಿಸಬೇಕು. ಇಲ್ಲದಿದ್ದಲ್ಲಿ ಬಸ್ಸಿನಲ್ಲಿ ಪ್ರಯಾಣಿಸಲು ನಿರಾಕರಿಸಲಾಗುವುದು. ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.