ಒಗ್ಗಟ್ಟಿನ ಮೂಲಕ ಸವಾಲನ್ನು ಎದುರಿಸಿ: ಶಾಸಕ ಬೋಪಯ್ಯ
ಓಣಂ ಹಬ್ಬ ಆಚರಣೆ
ಮಡಿಕೇರಿ,ಸೆ.25: ಸಮಾಜವನ್ನು ಸಂಘಟಿಸಿ ಒಗ್ಗಟ್ಟನ್ನು ಮೂಡಿಸಿದಾಗ ಮಾತ್ರ ಭವ್ಯ ಭಾರತದ ಯಾವುದೇ ಸವಾಲುಗಳನ್ನು ಎದುರಿಸಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೆಂದು ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ಮಲಯಾಳಿ ಸಂಘದಿಂದ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದ ಓಣಂ ಹಬ್ಬಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಾವೆಲ್ಲರೂ ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಈ ದೇಶದಲ್ಲಿ ಪ್ರತಿಯೊಂದು ಸಮಾಜವು ತನ್ನ ವಿಶಿಷ್ಟ ಸಂಸ್ಕೃತಿ, ಆಚಾರ ವಿಚಾರಗಳನ್ನು ಕೈಬಿಡದೆ ಅದನ್ನು ಯುವ ಸಮೂಹಕ್ಕೆ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು.
ಕೊಡಗು ಮತ್ತು ಕೇರಳ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಯಾವುದೇ ದೈವಗಳ ಮೂಲ ನೆಲೆ ನೆರೆಯ ಕೇರಳವಾಗಿದ್ದು, ಈ ರೀತಿ ಪರಸ್ಪರ ಸಂಬಂಧಗಳನ್ನು ಹೊಂದಿರುವ ಕೊಡಗು ಮತ್ತು ಕೇರಳದ ಸಂಸ್ಕೃತಿಯನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ನೆರೆಯ ಕೇರಳದಿಂದ ಕೊಡಗಿಗೆ ಬಂದು ನೆಲೆಸಿ ದುಡಿಮೆಯ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ಮಲಯಾಳಿ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪೋಷಕ ವರ್ಗ ತಮ್ಮ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಒದಗಿಸುವುದರೊಂದಿಗೆ ಲಭ್ಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯನ್ನು ಕಾಣಬೇಕೆಂದು ಅವರು ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಕೊಡಗು ಮತ್ತು ಕೇರಳದ ಮಂದಿ ಅಣ್ಣ ತಮ್ಮಂದಿರಂತೆ ಬಾಳಬೇಕಾಗಿದೆ. ಹಿಂದೂ ಮಲಯಾಳಿ ಸಂಘದ ಮೂಲಕ ತಮ್ಮ ಸಮೂಹದ ಮಕ್ಕಳಿಗೆ ಐಎಎಸ್, ಐಪಿಎಸ್ನಂತಹ ಉನ್ನತ ವ್ಯಾಸಂಗಕ್ಕೆ ಅಗತ್ಯ ಸಹಕಾರವನ್ನು ಒದಗಿಸುವಂತೆ ಸಲಹೆ ನೀಡಿದರು.
ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಕೇರಳಿಗರು ವಿಶ್ವದ ವಿವಿಧೆಡೆಗಳಲ್ಲಿ ನೆಲೆಸಿದ್ದು, ಓಣಂ ಹಬ್ಬದ ಮೂಲಕ ಸೌಹಾರ್ದ ಪಸರಿಸುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಸಮಾರಂಭವನ್ನು ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಎಸ್.ಸುರೇಶ್ಉದ್ಘಾಟಿಸಿದರು, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿದರು.
ಆಕರ್ಷಕ ಮೆರವಣಿಗೆ
ಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಚೌಡೇಶ್ವರಿ ದೇಗುಲ ದಿಂದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದವರೆಗೆ ಮಾವೇಲಿ ವೇಷ ಧಾರಿಗಳು, ಚಂಡೆ ವಾದ್ಯ, ಸ್ನೇಕ್ ಬೋಟ್ ಸ್ತಬ್ಧ ಚಿತ್ರವನ್ನು ಒಳ ಗೊಂಡಂತೆ ನೂರಾರು ಮಲಯಾಳಿ ಬಾಂಧವರು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು