ಉಡ ಬೇಟೆಗಾರರ ಪತ್ತೆಗೆ ವ್ಯಾಪಕ ಶೋಧ
ಚಿಕ್ಕಮಗಳೂರು, ಜ.11: ವಿನಾಶದ ಅಂಚಿನಲ್ಲಿರುವ ಉಡವನ್ನು ಬೇಟೆಯಾಡಿ ಕೊಂದು ವಿವಿಧ ಭಂಗಿಗಳ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಗತಿ ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ಹೊರ ವಲಯದ ಕಳಸ ರಸ್ತೆಯ ಕಾಫಿ ತೋಟವೊಂದರಲ್ಲಿ ಉಡ ಬೇಟೆ ನಡೆದಿರುವ ಮಾಹಿತಿ ಅರಣ್ಯಾಧಿಕಾರಿಗಳಿಗೆ ದೊರೆತಿದೆ. ಕಳೆದ ಕೆಲವು ದಿನಗಳ ಹಿಂದೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡ ಬೇಟೆ ನಡೆದಿದೆ ಎನ್ನಲಾಗುತ್ತಿದ್ದು, ಅಂದಾಜು ಏಳೆಂಟು ಕೆ.ಜಿ. ತೂಕದ ಉಡ ಬೇಟೆ ನಡೆದಿದೆ.
ಅದನ್ನು ಕೊಂದು ಬೇಟೆಗಾರರ ತಂಡ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಸದ್ಯ ಪ್ರಕರಣ ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ. ಈ ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಬೆನ್ನು ಬಿದ್ದಿರುವ ಸುದ್ದಿ ತಿಳಿದೊಡನೆ ಬಾಳೆಹೊನ್ನೂರು ವ್ಯಾಪ್ತಿಯ ಅಕ್ಷರ ನಗರ ಎಂಬಲ್ಲಿ ಅಪ್ಪು, ನವೀನ, ಆತನ ಸಹೋದರ ಹಾಗೂ ಸೈಫ್ ಎಂಬ ನಾಲ್ವರು ಯುವಕರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಾಳೆಹೊನ್ನೂರು ಅರಣ್ಯ ಉಪ ವಿಭಾಗಾಧಿಕಾರಿಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇಬ್ಬರ ಬಂಧನ
ಚಿಕ್ಕಮಗಳೂರು, ಜ.11: ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಹೊಸವರ್ಷಆಚರಣೆ ಸಂಭ್ರಮದಲ್ಲಿ ಉಡ ಬೇಟೆ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಳೆಹೊನ್ನೂರು ಮೂಲದ ಪ್ರವೀಣ್, ಸೈಫ್ ಬಂಧಿತ ಆರೋಪಿಗಳಾಗಿದ್ದಾರೆ. ಅಪ್ಪು, ನವೀನ್ಗಾಗಿ ಪೊಲೀಸರಶೋಧಮುಂದುವರಿದಿದೆ. ಬಾಳೆಹೊನ್ನೂರು ಸಮೀಪ ಕಾಫಿ ತೋಟದಲ್ಲಿ ಉಡ ಬೇಟೆಯಾಡಿ ಸೆಲ್ಫಿ ತೆಗೆದು ವಾಟ್ಸ್ಆ್ಯಪ್ನಲ್ಲಿ ವಿಕೃತ ಮೆರೆದಿದ್ದರು ಎನ್ನಲಾಗಿದೆ. ಬಾಳೆಹೊನ್ನೂರು ಪೊಲೀಸರ ಕಾರ್ಯಾಚರಣೆ ಮುಂದುವರಿಸಿದ್ದಾರೆ.