ಶಿವಮೊಗ್ಗ ಮನಪಾ ಮೇಯರ್ ಚುನಾವಣೆ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಮಾತುಕತೆ...?
ಕಾಂಗ್ರೆಸ್ ನಡೆ ನಿಗೂಢ
ಶಿವಮೊಗ್ಗ, ಫೆ,22: ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕನೆ ಹಂತದ ಮೇಯರ್- ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಫೆ. 28ರಂದು ಚುನಾವಣೆ ನಡೆಯಲಿದ್ದು, ಈ ಬಾರಿ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿವೆ ಎಂಬ ಕುತೂಹಲ ಮೂಡಿಸಿದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ‘ಪಾಲಿಕೆ ಪಾಲಿಟಿಕ್ಸ್’ ಕ್ರಮೇಣ ಬಿಸಿ ಏರಲಾರಂಭಿಸಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೇಯರ್ ಸ್ಥಾನ ತನ್ನದಾಗಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿವೆ.
ಈಗಾಗಲೇ ಆಯಾ ಪಕ್ಷದ ಪಾಲಿಕೆ ಸದಸ್ಯರು ಗುಪ್ತ ಸಮಾಲೋಚನೆ ನಡೆಸಲಾರಂಭಿಸಿದ್ದಾರೆ. ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಸತತ ಮೂರು ಬಾರಿ ಮೈತ್ರಿ ಮಾಡಿಕೊಂಡು ಯಶಸ್ವಿಯಾಗಿ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿದಿದ್ದ, ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲವಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಈ ಬಾರಿಯೂ ಮುಂದುವರಿಯಲಿದೆಯೇ? ನಾಲ್ಕನೆ ಹಂತದ ಅಧಿಕಾರದ ಚುಕ್ಕಾಣಿ ಹಿಡಿಯಲಿವೆಯೇ? ಎಂಬ ಕುತೂಹಲ ಪಾಲಿಕೆ ವಲಯದಲ್ಲಿ ಮನೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ನಿಗೂಢ: ಜೆಡಿಎಸ್ ಹಾಗೂ ಇತರ ಸದಸ್ಯರ ಬೆಂಬಲದೊಂದಿಗೆ ಕಳೆದ ಮೂರು ಬಾರಿ ಕಾಂಗ್ರೆಸ್ ಪಕ್ಷವು ಮೇಯರ್ ಗದ್ದುಗೆ ತನ್ನದಾಗಿಸಿಕೊಂಡಿತ್ತು. ಒಪ್ಪಂದದಂತೆ ನಾಲ್ಕನೆ ಅವಧಿಯ ಚುನಾವಣೆಯಲ್ಲಿ ಮೇಯರ್ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಡುವುದಾಗಿ ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದರೆನ್ನಲಾಗಿದೆ. ಅದರಂತೆ ಜೆಡಿಎಸ್ ಪಕ್ಷವು ಮೇಯರ್ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೇಯರ್ ಸ್ಥಾನವನ್ನು ತನ್ನ ಕೈಯಲ್ಲಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷ ಗಂಭೀರ ಚಿಂತನೆ ನಡೆಸುತ್ತಿದೆ. ಇದರಿಂದ ಜೆಡಿಎಸ್ಗೆ ಬೆಂಬಲ ವ್ಯಕ್ತಪಡಿಸಬೇಕೇ? ಬೇಡವೇ? ಎಂಬುದರ ಬಗ್ಗೆ ಇಲ್ಲಿಯವರೆಗೂ ಕಾಂಗ್ರೆಸ್ ಮುಖಂಡರು ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಇದರಿಂದ ಕಾಂಗ್ರೆಸ್ ನಡೆ ಸಂಪೂರ್ಣ ನಿಗೂಢವಾಗಿದ್ದು, ಕುತೂಹಲ ಕೆರಳುವಂತೆ ಮಾಡಿದೆ.
ಕಾಂಗ್ರೆಸ್ನ ಅನುಮಾನಾಸ್ಪದ ವರ್ತನೆಯು ಜೆಡಿಎಸ್ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೂ ಸಂಪರ್ಕದಲ್ಲಿದ್ದು, ಮೇಯರ್ ಸ್ಥಾನಕ್ಕೆ ಬೆಂಬಲಿಸುವವರೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಮಾತುಕತೆ?: ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಪಾಲಿಕೆ ಅಧಿಕಾರದಿಂದ ದೂರವಿಡಲು ಬಿಜೆಪಿ ಪಕ್ಷ ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಬೆಂಬಲ ವ್ಯಕ್ತಪಡಿಸುವ ಚಿಂತನೆಯನ್ನು ಬಿಜೆಪಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿಯ ಕೆಲ ಸದಸ್ಯರು ಇದನ್ನು ಅಲ್ಲಗಳೆದಿದ್ದಾರೆ.
‘ಈಗಾಗಲೇ ಮೀಸಲಾತಿ ಕಾರಣ ದಿಂದ ಉಪಮೇಯರ್ ಸ್ಥಾನ ನಿರಾಯಾಸವಾಗಿ ಪಕ್ಷಕ್ಕೆ ಲಭ್ಯವಾಗಲಿದೆ. ಉಳಿದಂತೆ ಮೇಯರ್ ಹುದ್ದೆಗೆ ಈ ಬಾರಿಯೂ ಪಕ್ಷ ಯತ್ನಿಸಲಿದ್ದು, ಪ್ರಬಲ ಆಕಾಂಕ್ಷಿಯಾಗಿದೆ. ಶತಾಯಗತಾಯ ಮೇಯರ್ ಹುದ್ದೆ ತನ್ನದಾಗಿಸಿಕೊಳ್ಳಲು ಹೋರಾಟ ನಡೆಸಲಿದೆ. ಆದರೆ ಪಕ್ಷದ ಜಿಲ್ಲಾ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ಸದಸ್ಯರು ಬದ್ಧರಾಗಿರುತ್ತೆವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಬಿಜೆಪಿ ಸದಸ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಎಲೆಕ್ಷನ್ ಮೇಲೆ ಕಣ್ಣು!
ನಾಲ್ಕನೆ ಅವಧಿಯ ಮೇಯರ್-ಉಪ ಮೇಯರ್ ಆಯ್ಕೆಯೇ ಅಂತಿಮ ವಾಗಿದ್ದು, ಐದನೆ ಅವಧಿಯ ಆಯ್ಕೆ ಪ್ರಕ್ರಿಯೆ ನಡೆಯು ವುದು ಅನುಮಾನ ಎಂಬುದು ಕೆಲ ಸದಸ್ಯರ ಅಭಿಪ್ರಾಯವಾದೆ
ಪ್ರಸ್ತುತ ಆಯ್ಕೆಯಾಗಲಿರುವ ಮೇಯರ್-ಉಪ ಮೇಯರ್ರವರ 12 ತಿಂಗಳ ಅವಧಿ ಪೂರ್ಣಗೊಂಡ ನಂತರ ಐದನೆ ಹಂತದ ಅವಧಿ ಐದಾರು ತಿಂಗಳಷ್ಟೇ ಉಳಿಯಲಿದೆ. ಅಷ್ಟರಲ್ಲಿಯೇ ವಿಧಾನಸಭೆ ಚುನಾವಣೆ, ನೀತಿ-ಸಂಹಿತೆ ಪ್ರಕ್ರಿಯೆಗಳು ಆರಂಭವಾಗಲಿದೆ. ಇದರಿಂದ ಮೇಯರ್ - ಉಪ ಮೇಯರ್ ಆಯ್ಕೆ ನಡೆಯುವುದು ಅನುಮಾನ ಎಂಬುದು ಕೆಲ ಸದಸ್ಯರ ವಾದ.
ಮೇಯರ್ ಗದ್ದುಗೆ ಹಿಡಿದುಕೊಂಡರೆ ವಿಧಾನಸಭೆ ಚುನಾವಣೆ ತಯಾರಿ ನಡೆಸಲುಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿರುವ ಪಕ್ಷಗಳ ಮುಖಂಡರು, ಇದರಿಂದ ಈ ಬಾರಿಯ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಳ್ಳಲು ಮೂರು ಪಕ್ಷಗಳು ಸಾಕಷ್ಟು ಪೈಪೋಟಿ ನಡೆಸುತ್ತಿವೆ. ಉಪಮೇಯರ್ ಅವಿರೋಧ ಆಯ್ಕೆ ಖಚಿತ
ಈಗಾಗಲೇ ರಾಜ್ಯ ಸರಕಾರ ಮೀಸಲಾತಿ ಪ್ರಕಟಿಸಿದೆ. ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಹಾಗೂ ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿರಿಸಿದೆ. ಮೀಸಲಾತಿ ಕಾರಣದಿಂದ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಸೇರಿದ ಸದಸ್ಯೆ ಬಿಜೆಪಿಯಲ್ಲಿ ಮಾತ್ರವಿದ್ದು, ರೂಪ ಲಕ್ಷ್ಮಣ್ ಅವರು ಉಪ ಮೇಯರ್ ಆಗುವುದು ನಿಶ್ಚಿತವಾಗಿದೆ.
ಪಕ್ಷಗಳ ಬಲಾಬಲದ ವಿವರ...
ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ಅವಧಿಯಿಂದಲೂ ಮೈತ್ರಿ ಆಳ್ವಿಕೆಗೆ ಪಾಲಿಕೆ ಆಡಳಿತ ಸಾಕ್ಷಿಯಾಗಿದೆ. ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ನಗರ ವ್ಯಾಪ್ತಿಯ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ಮತದಾನ ಮಾಡುವ ಹಕ್ಕಿದೆ. ಕಾಂಗ್ರೆಸ್ನಲ್ಲಿ 12 ಸದಸ್ಯರಿದ್ದು, ತಲಾ ಓರ್ವ ಶಾಸಕ - ವಿಧಾನಪರಿಷತ್ ಸದಸ್ಯರಿದ್ದಾರೆ. ಆದರೆ, ಶಾಸಕ ಪ್ರಸನ್ನಕುಮಾರ್ ಪಾಲಿಕೆಯ ಸದಸ್ಯರೂ ಆಗಿರುವುದರಿಂದ ಒಂದೇ ಮತದ ಪರಿಗಣನೆ ಬರಲಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಬಲ 13 ಆಗಲಿದೆ. ಉಳಿದಂತೆ ಬಿಜೆಪಿಯಲ್ಲಿ 11 ಸದಸ್ಯರಿದ್ದಾರೆ. ಓರ್ವ ಸಂಸದ, ಮೂವರು ವಿಧಾನಪರಿಷತ್ ಸದಸ್ಯರಿದ್ದು, ಒಟ್ಟಾರೆ ಬಿಜೆಪಿ ಬಲ 15 ಆಗಲಿದೆ. ಜೆಡಿಎಸ್ನಲ್ಲಿ 5 ಸದಸ್ಯರಿದ್ದು, ಓರ್ವ ಶಾಸಕರಿದ್ದಾರೆ. ಆ ಪಕ್ಷದ ಬಲಾಬಲ ಆರು ಆಗಲಿದೆ. ಉಳಿದಂತೆ ಇತರ ಸದಸ್ಯರು ಏಳು ಜನರಿದ್ದಾರೆ. ಇದರಲ್ಲಿ ಇತ್ತೀಚೆಗೆ ಸದಸ್ಯ ನರಸಿಂಹಮೂರ್ತಿ (ಬಾಬಣ್ಣ) ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಆ ಪಕ್ಷದ ಬಲ ಏಳಕ್ಕೇರಿದೆ. ಒಟ್ಟಾರೆ ಸದಸ್ಯರ ಬಲಾಬಲ 41 ಆಗಲಿದ್ದು, ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಗದ್ದುಗೇರಲು ಯಾವುದೇ ಪಕ್ಷದ ಮೈತ್ರಿಕೂಟಕ್ಕೆ 21 ಸದಸ್ಯರ ಬಹುಮತ ಬೇಕಾಗುತ್ತದೆ.