ಜ್ಯೋತಿ ಎಸ್. ಕುಮಾರ್, ಜಿ.ಪಂ. ಅಧ್ಯಕ್ಷೆ ಕೊಲೆ ಪ್ರಕರಣ: ಆರೋಪಿಗಳ ಬಂಧನ
ಹರಿಹರ, ಫೆ.23: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್.ಗುಳೇದ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಮೃತ ಮಹೇಂದ್ರ ಮತ್ತು ಆತನ ತಮ್ಮ ಆರೋಪಿ ಸರವಣ್ ಕುಮಾರ್ ಮಧ್ಯೆ ಆಗಾಗ್ಗೆ ಹಣಕಾಸು ಮತ್ತು ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದೇ ವಿಚಾರವಾಗಿ ತನ್ನ ಅಣ್ಣ ಮಹೇಂದ್ರನನ್ನು ಕೊಲೆ ಮಾಡಿಸುವ ಸಂಚು ರೂಪಿಸಿದ್ದ ಆರೋಪಿ ಸರವಣ್ ಕುಮಾರ್ ಇತರ ಮೂವರು ಆರೋಪಿಗಳ ಜೊತೆ ಸೇರಿ ಇದೇ ಫೆ.19ರಂದು ಹರಿಹರ-ದಾವಣಗೆರೆ ಹೊಸ ರಸ್ತೆಯ ಪಕ್ಕ ಒಂದನೆ ರೈಲ್ವೆ ಗೇಟ್ ಹತ್ತಿರ ಕರೆ ಮಾಡಿ ಕರೆಸಿಕೊಂಡು ಮಹೇಂದ್ರನಿಗೆ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು ಎಂದು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಹರಿಹರ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಸರವಣಕುಮಾರ್, ದುರುಗೇಶ ಶ್ರೀವಾತ್ಸವ್, ಗಗನ್ ಸಿಂಗ್, ಷರೀಫ್ಕುಮಾರ್ ಎಂಬವರನ್ನು ಬಂಧಿಸಿದ್ದಾರೆ ಎಂದರು.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಗ್ರಾಮೀಣ ಡಿವೈಎಸ್ಪಿ ಬಿ.ಎಸ್. ನೇಮೆಗೌಡ, ಸಿಪಿಐ ಜೆ.ಎಸ್.ನ್ಯಾಮೇಗೌಡ, ಗ್ರಾಮೀಣ ಪಿಎಸ್ಐ ಎಚ್.ಎಂ.ಸಿದ್ದೇಗೌಡ, ಎ.ಎಸೈ ಕೃಷ್ಣ ನಾಯ್ಕಾ, ಎಚ್.ಸಿ. ಯಾಸೀನ್ವುಲ್ಲಾ, ಮುಹಮ್ಮದ್ ಇಲಿಯಾಸ್, ನಾಗರಾಜ್, ಇಮ್ತಿಯಾಝ್, ಸೈಯದ್ ಗಫಾರ್, ಭರತ್, ಮನೋಹರ, ವೆಂಕಟೇಶ್, ಹರೀಶ್, ಎಮ್.ಪ್ರಕಾಶ್ ಕೃಷ್ಣ, ಡಿ.ವಿಜಯಕುಮಾರ್, ರಾಮಚಂದ್ರ ಜಾಧವ್, ನೀಲಕಂಠ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಮೂರೇ ದಿನಗಳಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.