ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ
ದಾವಣಗೆರೆ, ಮಾ.22: ಜಾಗದ ವಿಚಾರಕ್ಕೆ ಸಂಬಂಧಿಸಿ ಒಂದೇ ಕುಟುಂಬದ ಮೂವರ ಮೇಲೆ 14-15 ಜನರಿದ್ದ ಗುಂಪು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚನ್ನಗಿರಿ ತಾ. ತೋಪೇನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ತೋಪೇನಹಳ್ಳಿ ಗ್ರಾಮದ ಹನುಮಂತಪ್ಪ, ರಂಗಸ್ವಾಮಿ, ವೀರಪ್ಪ ಹಲ್ಲೆಗೊಳಗಾದವರಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಗ್ರಾಮದ ಗ್ರಾಪಂ ಸದಸ್ಯ ರಾಜಪ್ಪ, ಕೃಷ್ಣಪ್ಪ, ಹಾಸ್ಟೆಲ್ ವಾರ್ಡನ್ ಮಂಜು ಇತರರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಹನುಮಂತಪ್ಪನಿಗೆ ಸೇರಿದ ಜಾಗವನ್ನು ಗ್ರಾಪಂ ಸದಸ್ಯ ರಾಜಪ್ಪ ತನಗೆ ಬೇಕೆಂದು ಪಟ್ಟು
ಹಿಡಿದಿದ್ದರು. ಈ ವಿಚಾರವಾಗಿ ಉಭಯ ಕುಟುಂಬದ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು,ಈ ಕುರಿತು ಸಂತೇಬೆನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. 5 ಅಡಿ ಜಾಗ ರಾಜಪ್ಪನಿಗೆ ಬಿಟ್ಟುಕೊಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.
ರಾಜಪ್ಪನ ಸಂಬಂಧಿಯೊಬ್ಬರು ಪೊಲೀಸ್ ಅಧಿಕಾರಿಯಾಗಿದ್ದು, ತಮ್ಮ ಪ್ರಭಾವದಿಂದ ಜಾಗ ಕೊಡುವಂತೆ ಒತ್ತಡ ಹೇರಿದ್ದರು. ಈ ಬಗ್ಗೆ ಹನುಮಂತಪ್ಪ ಹಾಗೂ ಮಕ್ಕಳಿಗೆ ಒಪ್ಪಿಗೆ ಇರಲಿಲ್ಲ. ಅಷ್ಟಾದರೂ ತಮಗೆ ಸೇರಿದ 5 ಅಡಿ ಜಾಗ ಕೊಡುವುದಾಗಿ ಹೇಳಿದ್ದರೂ, ಹನುಮಂತಪ್ಪನ ಮನೆ ಪಕ್ಕದ 5 ಅಡಿ ಜಾಗವೇ ಬೇಕೆಂದು ರಾಜಪ್ಪ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಜಾಗದ ವಿಚಾರವಾಗಿ ಇಂದು ಮಧ್ಯಾಹ್ನ ರಾಜಪ್ಪ ಇತರರು 10-15 ಜನರ ಗುಂಪು ಕಟ್ಟಿಕೊಂಡು ನಮ್ಮ ಮನೆಗೆ ನುಗ್ಗಿ, ಊಟಕ್ಕೆ ಕುಳಿತಿದ್ದ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಹನುಮಂತಪ್ಪ, ಮಕ್ಕಳಾದ ರಂಗಸ್ವಾಮಿ, ವೀರಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆೆ. ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.