ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ : ಆರೋಪಿ ಬಂಧನ
ಮಡಿಕೇರಿ ಏ.6 : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರನ್ನು ಹತ್ಯೆಗೈದು ನಿರ್ಜನ ಪ್ರದೇಶದ ಗುಂಡಿಯಲ್ಲಿ ಮೃತದೇಹವನ್ನು ಎಸೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಡಿಕೇರಿಯ ಚಾಮುಂಡೇಶ್ವರಿ ನಗರದ ನಿವಾಸಿ ರವಿ(35) ಎಂಬವರೇ ಮೃತ ವ್ಯಕ್ತಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣಾ ಪೊಲೀಸರ ಸಹಕಾರದೊಂದಿಗೆ ಸುಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಡಿಕೇರಿಯ ಗೌಳಿಬೀದಿ ನಿವಾಸಿ ಡಾಲು ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಮಾ.31ರಂದು ಸುಳ್ಯ ತಾಲೂಕಿನ ಕೆ.ವಿ.ಜಿ ಆಸ್ಪತ್ರೆಯಿಂದ ರವಿ ನಿಗೂಢವಾಗಿ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ರವಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸುಳ್ಯ ಪೊಲೀಸರು ಮಡಿಕೇರಿ ನಗರ ಪೊಲೀಸರ ಸಹಕಾರವನ್ನು ಬಯಸಿದ್ದರು.
ಸುಳ್ಯ ಕೆವಿಜಿ ಆಸ್ಪತ್ರೆಯಿಂದ ರವಿ ಕಾಣೆಯಾಗಿದ್ದರಿಂದ ಪೊಲೀಸರು ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮರಾಗಳ ಚಿತ್ರಣಗಳನ್ನು ಪರಿಶೀಲನೆ ನಡೆಸಿದ್ದರು. ಆಸ್ಪತ್ರೆಯಲ್ಲಿ ಆರೋಪಿ ಡಾಲು, ರವಿಯೊಂದಿಗೆ ಕಲಹ ನಡೆಸುತ್ತಿದ್ದ ಚಿತ್ರಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.