ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ, ಎ.24: ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ: ಇಲ್ಲಿನ ಶ್ರೀರಾಮನಗರದ ನಿವಾಸಿ ತೀಪ್ಪೇಸ್ವಾಮಿಗೆ ತನ್ನ ಹೆಂಡತಿ ಶಶಿಕಲಾರ ಬಗ್ಗೆ ಅನುಮಾನವಿದ್ದು, ಜಗಳ ಮಾಡುತ್ತಿದ್ದ. 2015ರ ಎ.21ರ ರಾತ್ರಿ 8 ಗಂಟೆಗೆ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ಇದರಿಂದ ತಪ್ಪಿಸಿಕೊಂಡು ಶಶಿಕಲಾ ಹೊರಗೆ ಓಡಿದ್ದಾರೆ. ಬೆನ್ನತ್ತಿದ ಗಂಡ ಡಿಸಿಎಂ ಟೌನ್ಶೀಫ್ ಬಳಿ ಇರುವ ಕಿವುಡ ಮತ್ತು ಮೂಕರ ಶಾಲೆಯ ಬಳಿ ಈಳಿಗೆ ಮಣಿಯಿಂದ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಶಶಿಕಲಾ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೆಟಿಜೆ ನಗರ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳಿಂದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಂ. ಶ್ರೀದೇವಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು.