ಕಾಂಗ್ರೆಸ್-ಬಿಜೆಪಿ ಜೊತೆ ಮೈತ್ರಿಯಿಲ್ಲ: ಎಚ್.ಡಿ.ಕುಮಾರಸ್ವಾಮಿ
ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಮರು ಚುನಾವಣೆ
ಬೆಂಗಳೂರು, ಮೇ 21: ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಬಿಜೆಪಿ ಹಾಗೂ ಕಾಂಗ್ರೆಸ್ ಜತೆ ಕೈಗೂಡಿಸಿ ಸರಕಾರ ರಚಿಸುವ ಬದಲು ಮರುಚುನಾವಣೆಗೆ ಹೋಗುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ರವಿವಾರ ಬೆಂಗಳೂರು ಪ್ರೆಸ್ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಸೇರಿ ಮೈತ್ರಿಕೂಟ ಸರಕಾರ ರಚಿಸುವ ಸ್ಥಿತಿ ಬಂದರೆ ಭ್ರಷ್ಟರನ್ನು ಪೋಷಿಸುವ ಸ್ಥಿತಿ ಬರುತ್ತದೆ. ಹೀಗಾಗಿ ಆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಬದಲು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮರುಚುನಾವಣೆಗೆ ಹೋಗುವುದಾಗಿ ಅವರು ಹೇಳಿದರು.
ಕೇಂದ್ರದ ಗುಪ್ತಚರ ದಳ ಹಾಗೂ ರಾಜ್ಯದ ಗುಪ್ತಚರ ದಳಗಳು ಪ್ರತ್ಯೇಕವಾಗಿ ವರದಿ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್ ಪಕ್ಷವೇ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ. ಇದರಿಂದಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಆತಂಕ್ಕಕೀಡಾಗಿವೆ. ಆದುದರಿಂದಲೆ, ನನ್ನನ್ನು ಮುಗಿಸಲು ಜಂತಕಲ್ ಮೈನಿಂಗ್ ಪ್ರಕರಣದಂತಹ ಹುರುಳಿಲ್ಲದ ವಿಷಯಗಳನ್ನು ಹಿಡಿದುಕೊಂಡಿವೆ ಎಂದು ಅವರು ವ್ಯಂಗ್ಯವಾಡಿದರು.
ಕೇಂದ್ರದ ಗುಪ್ತಚರದಳ ಹಾಗೂ ರಾಜ್ಯದ ಗುಪ್ತಚರದಳಗಳು ನೀಡಿದ ವರದಿಯ ಕುರಿತು ನನಗೆ ವಿವರವಿದೆ. ಈಗ ಚುನಾವಣೆ ನಡೆದರೆ 80-90 ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ. ಬಹುಮತಕ್ಕೆ ಇನ್ನೂ 25 ಸೀಟುಗಳು ಕಡಿಮೆ ಬರಬಹುದು ಎಂಬ ಮಾಹಿತಿ ಇದೆ. ಆದರೆ ಚುನಾವಣೆ ಇನ್ನೂ ದೂರ ಇರುವುದರಿಂದ ಮತ್ತಷ್ಟು ಶ್ರಮ ಹಾಕಿ ಸರಕಾರ ರಚಿಸಲು ಅಗತ್ಯವಾದ 113 ಸೀಟುಗಳನ್ನು ಗೆಲ್ಲುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಜನರ ವಿಶ್ವಾಸ ಕಳೆದುಕೊಂಡಿವೆ. ಒಂದು ಕಾಲದಲ್ಲಿ ಇದೇ ಯಡಿಯೂರಪ್ಪ ಕೆಜೆಪಿ ಕಟ್ಟುವಾಗ, ಕಾಂಗ್ರೆಸ್ ಹಾಗೂ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿರುವುದರಿಂದ ‘ಕಲ್ಯಾಣ ಕರ್ನಾಟಕ ಕಟ್ಟಲು ಪ್ರಾದೇಶಿಕ ಶಕ್ತಿ’ಯ ಅಗತ್ಯವಿದೆ ಎಂದು ಹೇಳಿದ್ದನ್ನು ಕುಮಾರಸ್ವಾಮಿ ಸ್ಮರಿಸಿಕೊಂಡರು.
ಅದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿಯನ್ನು ನಾನು ಮಗನಂತೆ ನೋಡಿಕೊಂಡೆ. ಆದರೆ ಕೋಟ್ಯಾಂತರ ರೂ.ಲೂಟಿ ಮಾಡಿ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಹೇಳಿದ್ದರು. ಅದೇ ರೀತಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ವಿರುದ್ಧವೂ ಆರೋಪ ಮಾಡಿ, ವಾರಕ್ಕೆ ಮೂರು ಸಚಿವ ಸಂಪುಟ ಸಭೆ ಕರೆದು ನೂರಾರು ಕೋಟಿ ರೂ.ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿದ್ದರು ಎಂದು ಅವರು ಹೇಳಿದರು.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಆ ಸಂದರ್ಭದಲ್ಲಿ, ಬಿಜೆಪಿಯನ್ನು ಮುಗಿಸಲು ಕೆಜೆಪಿ ಬೇಕಿಲ್ಲ. ಅನಂತಕುಮಾರ್,ಜಗದೀಶ್ ಶೆಟ್ಟರ್, ಈಶ್ವರಪ್ಪ, ಸದಾನಂದಗೌಡರೆ ಸಾಕು ಎಂದು ಹೇಳಿದ್ದರು. ಈಗ ಅವರೆ ಬಿಜೆಪಿಯ ಮುಂಚೂಣಿಯಲ್ಲಿ ನಿಂತು ‘ಮಿಷನ್-150’ ಮಾಡುತ್ತಾರಂತೆ ಎಂದು ಕುಮಾರಸ್ವಾಮಿ ತಿಳಿಸಿದರು.
ಒಡೆದು ಹೋದ ಮನಸ್ಸುಗಳು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ನರೇಂದ್ರಮೋದಿ ಹೆಸರು ಬಿಟ್ಟರೆ ಹೇಳಲು ಬೇರೇನೂ ಇಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಸತತ ವಾಗ್ಧಾಳಿ ನಡೆಸಿದ ಅವರು, ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದೆ ಸಿದ್ಧರಾಮಯ್ಯ ಸರಕಾರದ ಸಾಧನೆ. ಲೋಕಾಯುಕ್ತವನ್ನು ಹಾಳು ಮಾಡಿದರು. ಕೆಪಿಎಸ್ಸಿ ಸಂಸ್ಥೆಯನ್ನು ಮುಗಿಸಿದರು ಎಂದು ಅವರು ಹೇಳಿದರು.
ಲಾಟರಿ ಟಿಕೇಟ್ ಹಗರಣದಿಂದ ಹಿಡಿದು, ಬೆಟ್ಟಿಂಗ್ ಧಂದೆಯ ತನಕ ಹಲವಾರು ಅಕ್ರಮಗಳು ನಡೆಯಲು ಕಾರಣರಾದರು. ಇಷ್ಟೆಲ್ಲ ಇದ್ದರೂ ತಮ್ಮ ಸರಕಾರದ ಸಾಧನೆಯನ್ನು ಮೆಚ್ಚಿ ಜನ ಗುಂಡ್ಲುಪೇಟೆ, ನಂಜನಗೂಡು ವಿಧಾನಸಭಾ ಚುನಾವಣೆಯಲ್ಲಿ ಜನ ತೀರ್ಪು ನೀಡಿದರು ಎನ್ನುತ್ತಾರೆ. ಇವರ ಸರಕಾರದ ಹಗರಣಗಳ ಪಟ್ಟಿ ಉದ್ದವಿದೆ. ನೀರಾವರಿಯಿಂದ ಹಿಡಿದು ಪರಿಶಿಷ್ಟರ ಕಲ್ಯಾಣದ ತನಕ ಯಾವುದೆ ಇಲಾಖೆಯಲ್ಲಿ ನಿರೀಕ್ಷಿಸಿದ ಗುರಿಯನ್ನು ಈ ಸರಕಾರ ತಲುಪಲೇ ಇಲ್ಲ ಎಂದು ಅವರು ದೂರಿದರು.
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.
ಆಡಳಿತದ ಸ್ವರೂಪ ಬದಲಾವಣೆ
ನಾವು ಅಧಿಕಾರಕ್ಕೆ ಬಂದರೆ ಆಡಳಿತದ ಸ್ವರೂಪ ಬದಲಾಯಿಸ್ತೇವೆ. ಶಾಸಕರನ್ನು ಖುಷಿ ಪಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದಿಲ್ಲ. ಜನಕಲ್ಯಾಣ ಕಾರ್ಯಕ್ರಮಗಳನ್ನು ಜನರ ಸಲಹೆ, ಸೂಚನೆ ಪಡೆದು ರೂಪಿಸುತ್ತೇವೆ. ಆಯಾ ಭಾಗಕ್ಕೆ ಬೇಕಿರುವ ಕಾರ್ಯಕ್ರಮಗಳನ್ನು ಸ್ಥಳೀಯರ ಸಲಹೆ ಮೇರೆಗೆ ರೂಪಿಸ್ತೇವೆ. ರೈತರ ಸಲಹೆ ಪಡೆದು ರೈತ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತೇವೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ