ಆಹಾರದ ಹಕ್ಕಿನ ಪ್ರಶ್ನೆಯೂ ಉದ್ಭವಿಸಲಿದೆ:ಕಾನೂನು ಸಚಿವ ಜಯಚಂದ್ರ
ಕೇಂದ್ರದ ಗೋಹತ್ಯೆ ನಿಷೇಧ ಕಾಯ್ದೆ
ಹುಬ್ಬಳ್ಳಿ, ಮೇ 27: ಕೇಂದ್ರದ ಗೋಹತ್ಯೆ ನಿಷೇಧ ಕಾನೂನು ಜಾರಿಯಿಂದ ಆಹಾರದ ಹಕ್ಕಿನ ಪ್ರಶ್ನೆಯೂ ಉದ್ಭವಿಸಲಿದೆ ಎಂದಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಯಾವುದೇ ಕಾನೂನು ಒಂದು ಧರ್ಮ-ಜನಾಂಗದ ವಿರೋಧಿ ಆಗಬಾರದು, ಇದರಿಂದ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
ಶನಿವಾರ ನೂತನ ಕೋರ್ಟ್ ಸಂಕೀರ್ಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1964ರಿಂದಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲಿದೆ. ಕೇಂದ್ರ ನೂತನವಾಗಿ ಜಾರಿಗೆ ತಂದ ಕಾಯ್ದೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.
ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಸಂಬಂಧ ಜಾರಿಗೆ ತಂದಿರುವ ನೂತನ ಕಾಯ್ದೆಯ ಪ್ರತಿ ಇನ್ನೂ ಕೈಗೆ ಸಿಕ್ಕಿಲ್ಲ. ಸಂಪೂರ್ಣ ವಿವರ ಪಡೆದ ಬಳಿಕ ಈ ಸಂಬಂಧ ಪ್ರತಿಕ್ರಿಯೆ ನೀಡುವೆ ಎಂದ ಅವರು, ಈ ಹಿಂದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ವೇಳೆ ಜಾರಿಗೆ ತಂದ ಕಾಯ್ದೆಯನ್ನು ನಮ್ಮ ಸರಕಾರ ಹಿಂಪಡೆದಿದೆ ಎಂದರು.
ಗೋವುಗಳ ರಕ್ಷಣೆ ಹಾಗೂ ಜನ ಸಾಮಾನ್ಯರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂದ ಅವರು, ಯಾವುದೇ ಕಾಯ್ದೆ ಜಾರಿಗೆ ಮೊದಲು ಸಾಧಕ-ಬಾಧಕಗಳನ್ನು ಅರಿತುಕೊಳ್ಳವುದು ಒಳಿತು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.
‘ಇಲ್ಲಿನ ವಿದ್ಯಾನಗರದ ನೂತನ ಕೋರ್ಟ್ ಸಂಕೀರ್ಣವನ್ನು 122 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಎಲ್ಲ ಸೌಲಭ್ಯಗಳುಳ್ಳ ಕೋರ್ಟ್ ಕಟ್ಟಡವನ್ನು ಜುಲೈನಲ್ಲಿ ಉದ್ಘಾಟಿಸಲಾಗುವುದು’
-ಟಿ.ಬಿ.ಜಯಚಂದ್ರ ಕಾನೂನು ಸಚಿವ