ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಎಸ್ಪಿ ಅಣ್ಣಾಮಲೈ ಹೊಸ ತಂತ್ರ
ಚಿಕ್ಕಮಗಳೂರು, ಜೂ.18: ಜಿಲ್ಲಾ ಕೇಂದ್ರದ ವಿವಿಧ ರಸ್ತೆಗಳಲ್ಲಿ ಶನಿವಾರ ಮತ್ತು ಭಾನುವಾರ ವಾಹನಗಳ ದಟ್ಟಣೆಯಿಂದ ಪೊಲಿಸರ ಜತೆಗೆ ವಾಹನ ಸಂಚಾರಿಗಳು ಮತ್ತು ಪಾದಾಚಾರಿಗಳಿಗೆ ತಲೆನೋವಾಗುತ್ತಿದೆ. ಇದನ್ನು ಕಂಡು ಎಸ್ಪಿ ಕೆ.ಅಣ್ಣಾಮಲೈ ವಾಹನಗಳ ದಟ್ಟಣೆ ಕಿರಿಕಿರಿ ತಪ್ಪಿಸಲು ಹೊಸ ತಂತ್ರವೊಂದನ್ನು ರೂಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕೆಂದ್ರದಲ್ಲಿ ಸುಮಾರು 95 ಹೋಟೆಲು,ಲಾಡ್ಜುಗಳಿದ್ದರೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗಳಿಲ್ಲ. ಹೀಗಾಗಿ ರಸ್ತೆ ಬದಿ ವಾಹನಗಳು ಸಾಲು ಸಾಲಾಗಿ ನಿಂತಿರುವುದು ಮಾಮೂಲಿನಂತಾಗಿ ಹೋಗಿದೆ. ಇದರಿಂದ ಟ್ರಾಫಿಕ್ ಕಿರಿಕಿರಿ ಎದುರಿಸುತ್ತಿರುವ ವಾಹನ ಸವಾರರು ಮತ್ತು ಸಾರ್ವಜನಿಕ ಪಾದಾಚಾರಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವುದು ಮಾತ್ರ ತಪ್ಪಿಲ್ಲ.
ಒಂದೆಡೆ ವಾಹನಗಳ ಸಂಖ್ಯೆ ಪ್ರತಿನಿತ್ಯ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆಯೂ ಮಿತಿ ಮೀರುತ್ತಿದೆ. ಇದರಿಂದ ಪ್ರತಿನಿತ್ಯ ಅಧಿಕಗೊಳ್ಳುತ್ತಿರುವ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಎಸ್ಪಿ ಕೆ.ಅಣ್ಣಾಮಲೈ ಹೋಟೆಲು ಮತ್ತು ಲಾಡ್ಜುಗಳ ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ. ಸಂಚಾರಿ ಸಮಸ್ಯೆ ತಪ್ಪಿಸಲು 10ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿರುವ ಲಾಡ್ಜ್ಗಳ ಮಾಲೀಕರು ಕಡ್ಡಾಯವಾಗಿ ಕಾವಲುಗಾರರನ್ನು ನೇಮಿಸಿಕೊಳ್ಳುವಂತೆ 15 ದಿನಗಳ ಗಡುವು ನೀಡಿದ್ದಾರೆ.
ಇದರ ಜೊತೆಗೆ ಎಂ.ಜಿ.ರಸ್ತೆ ಹಾಗೂ ಐ.ಜಿ.ರಸ್ತೆಯಲ್ಲಿರುವ ಅಂಗಡಿ ಮಾಲೀಕರು ತಮ್ಮ ಅಂಗಡಿ ುುಂದೆ ತಲಾ ಒಂದು ವಾಹನಗಳನ್ನು ನಿಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 391220 ವಿವಿಧ ವಾಹನಗಳಿದ್ದು ಮೇ ತಿಂಗಳೊಂದರಲ್ಲೇ 2011 ವಾಹನಗಳು ಹೊಸದಾಗಿ ನೋಂದಣಿಯಾಗಿವೆ. ಸರಾಸರಿ 1500 ವಾಹನಗಳು ಪ್ರತಿ ತಿಂಗಳು ಹೊಸದಾಗಿ ಸೇರ್ಡೆಗೊಳ್ಳುತ್ತಿವೆ.
ಹಾಗಾಗಿ ಇರುವ ರಸ್ತೆಗಳಲ್ಲೇ ಸುಗಮ ಸಂಚಾರ ವ್ಯವಸ್ಥೆ ಮಾಡಲು ಕೆಲವು ಅಗತ್ಯ ಕ್ರಮಗೊಂಡಿದ್ದು ಸಾರ್ವಜನಿಕರ ಸಹಕರಿಸಬೇಕಾಗಿ ಎಸ್ಪಿ ಅಣ್ಣಾಮಲೈ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.