ಹನೂರು: ಎಸ್ಡಿಪಿಐ ಮುಖಂಡ ಅಶ್ರಫ್ ಹತ್ಯೆ ಖಂಡಿಸಿ ಪ್ರತಿಭಟನೆ
ಹನೂರು, ಜೂ. 22: ಎಸ್ಡಿಪಿಐ ಮುಖಂಡ ಅಶ್ರಫ್ ಹತ್ಯೆ ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಸ್ಡಿಪಿಐ ಅಧ್ಯಕ್ಷ ನೂರುಲ್ಲಾ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು ಎಸ್ಡಿಪಿಐ ವಲಯಾಧ್ಯಕ್ಷರಾಗಿದ್ದ ಅಶ್ರಫ್ ಅವರ ಕೊಲೆ ಪೂರ್ವ ಯೋಜಿತ ಕೃತ್ಯವಾಗಿದ್ದು, ಈ ಕೃತ್ಯದಲ್ಲಿ ಕರಾವಳಿ ಭಾಗದ ಸಂಘ ಪರಿವಾರದ ಮುಖಂಡರ ಕೈವಾಡವಿದೆ. ಆದುದರಿಂದ ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಮೃತ ಅಶ್ರಫ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕಲ್ಪಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ಜರುಗುತ್ತಿದ್ದು ಸಂಘಟನೆಯನ್ನು ನಿಷೇಧಿಸಬೇಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಪ್ರೇರಿತ ಗಲಭೆಗಳು ಯಥೇಚ್ಛವಾಗಿ ಜರುಗುತ್ತಿದ್ದರೂ ನಿಯಂತ್ರಸುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ವಿಫಲವಾಗಿರುವುದರಿಂದ ಇದರ ನೈತಿಕ ಹೊಣೆ ಹೊತ್ತು ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಉಪತಹಶೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಕಾರರು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಕಾರ್ಯಕರ್ತರಾದ ಇಝಾಮಾಮ್, ಝಿಯಾ, ಸದ್ದಾಂ, ಶೇಖ್, ರಿಝ್ವಾನ್ ಇನ್ನಿತರರು ಹಾಜರಿದ್ದರು.