ಯುವಕನ ಹತ್ಯೆ: ಎಸ್ಡಿಪಿಐನಿಂದ ಪ್ರತಿಭಟನೆ
ಶಿವಮೊಗ್ಗ, ಜೂ. 22: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ಕರಾವಳಿ ಸೈಟ್ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಮುಖಂಡ ಮಹಮ್ಮದ್ ಅಶ್ರಫ್ ಹತ್ಯೆ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗುರುವಾರ ಮಧ್ಯಾಹ್ನ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಬುಧವಾರ ಅಶ್ರಫ್ರವರು ತಮ್ಮ ಆಟೋದಲ್ಲಿ ಬೀಡಿ ವ್ಯಾಪಾರಿಯನ್ನು ಕರೆದೊಯ್ಯುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ ಇವರ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹತ್ಯೆಗೈದಿದೆ. ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಶ್ರಫ್, ಎಲ್ಲ ಸಮುದಾಯದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅಂತಹ ವ್ಯಕ್ತಿಯ ಹತ್ಯೆ ನಡೆದಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ ಎಂದು ಪ್ರತಿಭಟನಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಘಪರಿವಾರವು ಚುನಾವಣೆ ಮತ್ತು ಅಲ್ಪಸಂಖ್ಯಾತರ ಹಬ್ಬದ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಲು ಹಿಂದಿನಿಂದಲೂ ಸಂಚು ರೂಪಿಸಿಕೊಂಡು ಬರುತ್ತಿದೆ. ಈ ಹಿಂದೆ ನಡೆದಿರುವ ಹಲವು ಗಲಭೆ, ಕೊಲೆಪಾತಕಗಳೇ ಇದಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿಯೂ ಅಶಾಂತಿ-ಗಲಭೆ ಸೃಷ್ಟಿಯಾಗಿದೆ. ಸರ್ಕಾರದ ಮಂತ್ರಿಗಳೇ ಕರಾವಳಿಯಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕಲಡ್ಕ ಪ್ರಭಾಕರ ಭಟ್ ಕಾರಣಕರ್ತರೆಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹಲವಾರು ಆರೋಪಗಳನ್ನು ಹೊಂದಿರುವ ಕಲಡ್ಕ ಪ್ರಭಾಕರ್ ಭಟ್ರನ್ನು ಬಂಧಿಸಿ ಕೇಸ್ ಹಾಕಿ ಕಠಿಣ ಶಿಕ್ಷೆ ಗೊಳಪಡಿಸದಿರುವುದರಿಂದಲೇ ಕರಾವಳಿಯಲ್ಲಿ ನಿರಂತರವಾಗಿ ಗಲಭೆಗಳು ಮರುಕಳಿಸುವಂತಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಶಿಕ್ಷಣ, ಆರೋಗ್ಯ, ವಾಣಿಜ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಕರಾವಳಿಯು ಇಡೀ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇಂತಹ ಕರಾವಳಿ ಪ್ರದೇಶದಲ್ಲಿ ನಿರಂತರವಾಗಿ ಅಶಾಂತಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಎಲ್ಲ ಧರ್ಮೀಯರು ಒಟ್ಟುಗೂಡಿ ಕರಾವಳಿಯಲ್ಲಿ ಶಾಂತಿಯ ವಾತಾವರಣ ನೆಲೆಸುವಂತೆ ಮಾಡುವ ಕೆಲಸ ನಡೆಸಬೇಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಆಟೋ ಚಾಲಕ ಅಶ್ರಫ್ ಹತ್ಯೆ ನಡೆಸಿದ ಕೊಲೆಗಡುಕರ ವಿರುದ್ದ ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಿ, ಜಾಮೀನು ಸಿಗದಂತೆ ಮಾಡಬೇಕು. ಅವರ ಕುಟುಂಬಕ್ಕೆ 20 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಬೇಕು ಎಂದು ಪ್ರತಿಭಟನಕಾರರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಮಹಮ್ಮದ್ ಕಲೀಂವುಲ್ಲಾ, ಬಶೀರ್ ಅಹಮದ್, ಅಬ್ದುಲ್ ಮಜೀಬ್, ಇಮ್ರಾನ್, ಇಸಾಖ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.