ನೀಟ್ ಫಲಿತಾಂಶ: ದಾವಣಗೆರೆಯ ಪಿ.ವೈ. ಗಣೇಶ್ ಗೆ 6ನೆ ರ್ಯಾಂಕ್
ದಾವಣಗೆರೆ, ಜೂ.24: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಕೇಂದ್ರ ಸೆಕೆಂಡರಿ ಶಿಕ್ಷಣ ಮಂಡಳಿ ಶುಕ್ರವಾರ ಪ್ರಕಟಗೊಳಿಸಿದ್ದು, ದಾವಣಗೆರೆ ನಗರದ ವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿ ಪಿ.ವೈ. ಗಣೇಶ್ ದೇಶಕ್ಕೆ 6ನೇ ರ್ಯಾಂಕ್ ಬಂದಿದ್ದಾರೆ.
ವೈದ್ಯ ಹಾಗೂ ದಂತ ವೈದ್ಯಕೀಯ ಕಾಲೇಜು ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ನಡೆಸಿದ್ದು, ನಗರದ ಶ್ರೀ ವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿ ಪಿ.ವೈ. ಗಣೇಶ್ 2207 ರ್ಯಾಂಕ್ ಪಡೆಯುವ ಮೂಲಕ ದೇಶದಲ್ಲಿ ಆರನೇ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯ ರೈತ ಕುಟುಂಬದ ಪ್ರಕಾಶ್ ಹಾಗೂ ನೇತ್ರಾವತಿ ದಂಪತಿಗೆ ಇಬ್ಬರು ಮಕ್ಕಳಿದ್ದು, ತಮ್ಮ ಮಗನ ಸಾಧನೆ ಕಂಡು ದಂಪತಿ ಸಂತಸ ವ್ಯಕ್ತಪಡಿಸಿದರು. 3 ಎಕರೆ ಜಮೀನು ಹೊಂದಿದ್ದು, ಇದರಿಂದಲೇ ಜೀವನ ನಿರ್ವಹಣೆ ಮಾಡಲಾಗುತ್ತಿದೆ.
ಪಿ.ವೈ. ಗಣೇಶ್ ದಾವಣಗೆರೆಯ ಶ್ರೀ ವೈಷ್ಣವಿ ಚೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ದ್ವಿತೀಯ ಪಿಯುಸಿಯಲ್ಲಿ 577 ಅಂಕಗಳಿಸಿದ್ದ ಗಣೇಶ್ ಸಿಇಟಿಯಲ್ಲಿ 2207 ರ್ಯಾಂಕ್ ಪಡೆದು, ದೇಶಕ್ಕೆ 6ನೇ ಟಾಪರ್ ಆಗಿದ್ದಾರೆ.