ಎಬಿವಿಪಿ ಕಾರ್ಯಕರ್ತರಿಗೆ ಎಸ್ಪಿ ಅಣ್ಣಾಮಲೈ ಮಂಗಳಾರತಿ
ವಿದ್ಯಾರ್ಥಿಗಳು-ಕಾಲೇಜು ಆಡಳಿತ ಮಂಡಳಿಯ ಜಗಳದಲ್ಲಿ ಮಧ್ಯಪ್ರವೇಶ
ಚಿಕ್ಕಮಗಳೂರು, ಜು.1: ನಗರದ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ನಡುವಿನ ಜಗಳಕ್ಕೆ ಮಧ್ಯಸ್ಥಿಕೆ ವಹಿಸಲು ಬಂದ ಎಬಿವಿಪಿ ಕಾರ್ಯಕರ್ತರನ್ನು ಎಸ್ಪಿ ಕೆ.ಅಣ್ಣಾಮಲೈ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಇಲ್ಲಿನ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಸಮಯದಲ್ಲಿ ಎಸ್ಪಿ ಕೆ.ಅಣ್ಣಾಮಲೈ ಆಡಳಿತ ಮಂಡಳಿ ಜತೆಗೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಒಳಬರಲು ಪ್ರಯತ್ನಿಸುತ್ತಿದ್ದ ಎಬಿವಿಪಿ ಕಾರ್ಯಕರ್ತರನ್ನು ಕಂಡು ಎಸ್ಪಿ ಕೆ.ಅಣ್ಣಾಮಲೈ ಗರಂ ಆದರು.
"ಇದು ಕಾಲೇಜು, ಇಲ್ಲಿಗೆ ಬರಲು ನಿಮಗೆ ದೂರು ಕೊಟ್ಟವರು ಯಾರು? ಒಳಬರಲು ನಿಮಗೆ ಅನುಮತಿ ನೀಡಿದವರು ಯಾರು? ಎಂದು ಪ್ರಶ್ನಿಸಿ, ಅನುಮತಿ ರಹಿತವಾಗಿ ಕಾಲೇಜು ಒಳ ಪ್ರವೇಶಿಸಿದವರನ್ನು ಹೊರ ಹೋಗುವಂತೆ ಆದೇಶಿಸಿದರು ಎಂದು ತಿಳಿದು ಬಂದಿದೆ.
ಕಾಲೇಜಿನಲ್ಲಿ ಮೂಲಭೂತ ಸೌಕರ್ಯವಿಲ್ಲ. ಉಪನ್ಯಾಸಕರು ವಿದ್ಯಾರ್ಥಿನಿಯರ ಜತೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ. ‘ಐ ಲವ್ಯು’ ಎಂದು ಮೆಸೇಜ್ಗಳನ್ನು ಕಳಿಸುತ್ತಾರೆ. ವಿದ್ಯಾರ್ಥಿನಿಯರ ದೇಹ ಸ್ಪರ್ಶಿಸಿ ಮಾತನಾಡುತ್ತಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ ಎನ್ನಲಾಗಿದೆ.