ಚಿರತೆ ದಾಳಿ : ಓರ್ವ ಸಾವು
ಮಾಲೂರು,ಜು.2: ತಾಲೂಕಿನ ಟೇಕಲ್ ಹೋಬಳಿಯ ಕೆಂಪಸಂದ್ರ ಗ್ರಾಮದ ಸಮೀಪ ನೀಲಗಿರಿ ತೋಪಿನಲ್ಲಿ ವ್ಯಕ್ತಿಯೊಬ್ಬರನ್ನು ಚಿರತೆಯೊಂದು ದಾಳಿ ಮಾಡಿ ಸಾಯಿಸಿರುವ ಘಟನೆ ರವಿವಾರ ಮುಂಜಾನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಟೇಕಲ್ ಹೋಬಳಿಯ ಬಂಡೂರು ಅಗ್ರಹಾರ ಗ್ರಾಮದ ವೆಂಕಟೇಶಪ್ಪ(45) ಎಂದು ಗುರುತಿಸಲಾಗಿದೆ. ವೆಂಕಟೇಶಪ್ಪ ಕಲ್ಲುಬಂಡೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಶನಿವಾರ ಎಂದಿನಂತೆ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ವೀರಕಪುತ್ರ ಹಾಗೂ ಬಂಡೂರು ಅಗ್ರಹಾರ ಗ್ರಾಮದ ನಡುವಿನ ಕೆಂಪಸಂದ್ರ ಗ್ರಾಮದ ಸಮೀಪ ನೀಲಗಿರಿ ತೋಪಿನಲ್ಲಿ ರಾತ್ರಿ ಮಲಗಿಕೊಂಡಿದ್ದಾನೆ. ಮಧ್ಯರಾತ್ರಿ ಚಿರತೆ ವೆಂಕಟೇಶಪ್ಪನ ಮೇಲೆ ದಾಳಿ ಮಾಡಿ ಸಾಯಿಸಿದೆ. ಚಿರತೆ ವೆಂಕಟೇಶಪ್ಪನ ದೇಹವನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಭಾನುವಾರ ಬೆಳಗ್ಗೆ ವಿಷಯ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಹೋಗಿ ನೋಡುವರಷ್ಟರಲ್ಲಿ ವೆಂಕಟೇಶಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಶಾಸಕ ಕೆ.ಎಸ್.ಮಂಜುನಾಥಗೌಡ ಅವರು ಬೇಟಿ ನೀಡಿ ಮೃತಪಟ್ಟ ವೆಂಕಟೇಶಪ್ಪ ಅವರ ಕುಟುಂಬಕ್ಕೆ ಸ್ವಾಂತನ ಹೇಳಿದರು. ಅಲ್ಲದೆ, ವ್ಯಯುಕ್ತಿಕವಾಗಿ 20 ಸಾವಿರ ರೂಗಳನ್ನು ವಿತರಿಸಿದರು. ಅರಣ್ಯ ಇಲಾಖೆಯಿಂದ 5 ಲಕ್ಷ ರೂಗಳನ್ನು ಕೂಡಲೇ ವಿತರಿಸುವುದಾಗಿ ತಿಳಿಸಿದರು. ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಸಹ ಬೇಟಿ ನೀಡಿ ವ್ಯಯುಕ್ತಿಕವಾಗಿ 20 ಸಾವಿರ ರೂಗಳನ್ನು ವಿತರಿಸಿದರು.