ದೇಶಹಳ್ಳಿ ಕೆರೆಯಲ್ಲಿ ಧರಣಿ 14ನೆ ದಿನಕ್ಕೆ
ತ್ರಿನೇತ್ರ ಸ್ವಾಮೀಜಿ, ತಿಥಿ ಖ್ಯಾತಿಯ ಗಡ್ಡಪ್ಪ, ಸೆಂಚುರಿಗೌಡ ಬೆಂಬಲ
ಮದ್ದೂರು, ಜು.20: ಕಾವೇರಿ ಕೊಳ್ಳದ ನಾಲೆಗಳಿಗೆ ನೀರುಹರಿಸಲು ಒತ್ತಾಯಿಸಿ ತಾಲೂಕಿನ ದೇಶಹಳ್ಳಿ ಕೆರೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರಿದಿದ್ದು, 14ನೆ ದಿನಕ್ಕೆ ಕಾಲಿಟ್ಟಿದೆ. ಗುರುವಾರದ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಬೇಬಿಮಠದ ತಿನೇತ್ರಶಿವಯೋಗಿ ಸ್ವಾಮೀಜಿ, ನಾಲೆಗೆ ನೀರುಹರಿಸುವ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ಚಳವಳಿಗೆ ಬೆಲೆಕೊಟ್ಟು ನೀರುಹರಿಸಬೇಕು ಎಂದು ಒತ್ತಾಯಿಸಿದರು.
ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ, ಸೆಂಚುರಿಗೌಡ ಮಾತನಾಡಿ, ರಾಜ್ಯಕ್ಕೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರಲ್ಲಿ ತೀವ್ರ ಅನ್ಯಾಯವಾಗಿದೆ. ನ್ಯಾಯಾಲಯಕ್ಕೆ ರಾಜ್ಯದ ಮಳೆಬೆಳೆ ಪರಿಸ್ಥಿತಿ ತಿಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಲ್ಲದೆ, ನಾಲೆಗಳಿಗೆ ನೀರುಹರಿಸಬೇಕೆಂದು ಆಗ್ರಹಿಸಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಶಿವಕುಮಾರ್, ತಾಲೂಕು ಭ್ರಷ್ಟಚಾರ ನಿಗ್ರಹ ಸಂಘದ ಅಧ್ಯಕ್ಷ ಸೋ.ಸಿ.ಶಿವರಾಮು, ಕಾರ್ಯದರ್ಶಿ ಪ್ರಿಯಾಂಕ, ಇತರ ಸಂಘಟನೆಗಳು ಧರಣಿಗೆ ಬೆಂಬಲ ನೀಡಿದವು. ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ಗೌಡ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಇಂದುಕುಮಾರ್, ಗುಂಡ ಮಹೇಶ್, ಸುನೀಲ್, ಲೋಕೇಶ್, ಮಲ್ಲರಾಜು,ದಿನೇಶ್, ಜಯರಾಂ, ವಿನಯ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.