ಟಿಪ್ಪು ಎಕ್ಸ್ಪ್ರೆಸ್ಗೆ ಸಿಲುಕಿಕೊಂಡ ಎಮ್ಮೆ
ಸಂಚಾರದಲ್ಲಿ ವ್ಯತ್ಯಯ; ಪ್ರಯಾಣಿಕರ ಪರದಾಟ
ಮಂಡ್ಯ, ಜು.28: ಎಮ್ಮೆಯೊಂದು ಸಿಲುಕಿಕೊಂಡ ಪರಿಣಾಮ ಮೈಸೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಟಿಪ್ಪು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಸುಮಾರು ಮೂರು ತಾಸು ವ್ಯತ್ಯಯವಾಗಿ ಪ್ರಯಾಣಿಕರು ಪರದಾಡಿದರು.
ಮೈಸೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಶುಕ್ರವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಬೂದನೂರು ಬಳಿ ಎರಡು ಎಮ್ಮೆಗಳು ಅಡ್ಡಬಂದಿದ್ದು, ಒಂದು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದು ತೀವ್ರ ಗಾಯಗೊಂಡಿತು.
ಎಮ್ಮೆ ಅಡ್ಡಬಂದ ಹಿನ್ನೆಲೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ರೈಲಿನ ಬ್ರೇಕ್ನ್ನು ಚಾಲಕ ತಕ್ಷಣ ಒತ್ತದ ಕಾರಣ, ಬ್ರೇಕ್ ಏರ್ ಕಂಪ್ರೈಸರ್ ತುಂಡಾಗಿ ಹೋಯಿತು. ಇದರಿಂದ ರೈಲು ಚಲಿಸುವುದಕ್ಕೆ ತೊಂದರೆ ಉಂಟಾಯಿತು.
ತಕ್ಷಣ ತಾಂತ್ರಿಕ ತಜ್ಞರನ್ನು ಸಂಪರ್ಕಿಸಿ ಸರಿಪಡಿಸುವ ಯತ್ನ ನಡೆಯಿತು. ಆದರೆ, ಸಫಲವಾಗಲಿಲ್ಲ. ಅಂತಿಮವಾಗಿ ಮೈಸೂರಿನಿಂದ ಮತ್ತೊಂದು ಎಂಜಿನ್ ತಂದು ಜೋಡಿಸಿ ಮಧ್ಯಾಹ್ನ 2.45ರ ವೇಳೆಗೆ ರೈಲಿಗೆ ಚಾಲನೆ ನೀಡಲಾಯಿತು.
ಆಕಸ್ಮಿಕ ಘಟನೆಯಿಂದ ರೈಲು ಪ್ರಯಾಣಿಕರು ಪರದಾಡುವಂತಾಯಿತು.
Next Story