ಆಗಸ್ಟ್ 15 ರಂದು ಕಪ್ಪುಬಾವುಟ ಪ್ರದರ್ಶನ: ಮಾದಿಗ ದಂಡೋರ ಹೋರಾಟ ಸಮಿತಿ
ತುಮಕೂರು.ಆ.14: ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಒತ್ತಾಯಿಸಿ ಆಗಸ್ಟ್ 15 ರ ಸ್ವಾತಂತ್ರ ದಿನಾಚರಣೆಯಂದು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ.
ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಸಾಗರ್ ಪತ್ರಿಕೆ ಹೇಳಿಕೆ ನೀಡಿದ್ದು, ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜಾತಿವಾರು ಜನಗಣತಿ ಮತ್ತು ಮೀಸಲಾತಿಯಲ್ಲಿ ತಾರತಮ್ಯ ಸಮೀಕ್ಷೆಯನ್ನು ನಡೆಸಿ,30 ಜಿಲ್ಲೆಗಳ ಆಡಳಿತ ಯಂತ್ರವನ್ನು ಬಳಸಿಕೊಂಡು ಸಿದ್ದಪಡಿಸಿದ ವರದಿಯನ್ನು ನ್ಯಾಯಮೂರ್ತಿ ಎ.ಜೆ.ಸದಾಶಿವ ವಿಚಾರಣಾ ಆಯೋಗವು ಸರಕಾರಕ್ಕೆ 2012ರ ಜೂನ್ 14 ರಂದೇ ಸಲ್ಲಿಸಿದ್ದರೂ ಇದುವರೆಗೆ ವರದಿಯನ್ನು ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಕೆಲಸವನ್ನು ಇದುವರೆಗಿನ ಸರಕಾರಗಳು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೊರಾಟ ಸಮಿತಿ ರಾಜ್ಯ ಸಮಿತಿಯ ತೀರ್ಮಾನದಂತೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.