ಕಾನೂನಿನ ರಕ್ಷಣೆ ಮಾಡುವಲ್ಲಿ ವಕೀಲರ ಪಾತ್ರ ಮಹತ್ತರ: ಡಿವೈಎಸ್ಪಿ ಪ್ರಭುಶಂಕರ ರೆಡ್ಡಿ
ಚಿಕ್ಕಬಳ್ಳಾಪುರ, ಸೆ.21: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜಾರಿಗೊಂಡಿರುವ ಕಾನೂನಿನ ರಕ್ಷಣೆ ಮಾಡುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಡಿವೈಎಸ್ಪಿ ಪ್ರಭುಶಂಕರರೆಡ್ಡಿ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಹೊರಹೊಲಯದಲ್ಲಿನ ಕೆಂಪೇಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯಾಜ್ಯಗಳ ಕುಲಂಕುಶವಾಗಿ ಅಧ್ಯಯನ ನಡೆಸುವ ಜೊತೆಗೆ ನ್ಯಾಯಾಲಯಕ್ಕೆ ಸಕಾಲದಲ್ಲಿ ಸೂಕ್ತ ಮಾಹಿತಿ ಒದಗಿಸುವ ಪರಿಪಾಠವನ್ನು ಬೆಳಡಿಸಿಕೊಳ್ಳಬೇಕಿದೆ ಎಂದರು.
ವ್ಯಾಜ್ಯಗಳನ್ನು ಲೋಕ ಅದಲತ್ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಮೂಲಕ ನ್ಯಾಯಲಯದ ಅಮೂಲ್ಯವಾದ ಸಮಯವನ್ನು ಉಳಿಸುವ ಜೊತೆಗೆ ಶಾಂತಿ ಸಾಮರಸ್ಯ ಕಾಪಾಡಲು ಮುಂದಾಗಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾಲೇಜಿನ ಪ್ರಾಂಶುಪಾಲೆ ಬಿ.ಜಿ. ಶೋಭಾ ಮಾತಾನಾಡಿ, ಕಾನೂನು ವಿದ್ಯಾರ್ಥಿಗಳು ಯಾವ ರೀತಿ ಕಾನೂನು ಅಭ್ಯಾಸ ಮಾಡಬೇಕು. ಗುರು ಮತ್ತು ಗುರಿ ಯಾವ ರೀತಿ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಡಾ.ಕೆ.ಪಿ. ಶ್ರೀನಿವಾಸಮೂರ್ತಿ, ಒಕ್ಕಲಿಗರ ಸಂಘದ ಖಾಚಾಂಚಿ ನಾಗರಾಜು, ವೃತ್ತ ನೀರಿಕ್ಷಕ ಶಿವಸ್ವಾಮಿ, ಎಸ್ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ವಿದ್ಯಾರ್ಥಿಗಳಾದ ಮಂಜುನಾಥರೆಡ್ಡಿ, ಶ್ರೀನಿವಾಸ, ವಿಜಯ್, ಅಶ್ವಿನ್, ಮಹೇಶ್, ಶ್ರೀನಾಥ್ ಇತರರು ಇದ್ದರು.