ಗುಜರಾತ್ ಚುನಾವಣೆ ಘೋಷಣೆ ವಿಳಂಬ: ಎಸ್ಡಿಪಿಐ ಆಕ್ರೋಶ
ಚಿಕ್ಕಮಗಳೂರು, ಅ.17: ಕೇಂದ್ರ ಚುನಾವಣಾ ಆಯೋಗವು ಗುಜರಾತ್ ವಿಧಾನಸಭೆಯ ಚುನಾವಣೆ ಘೋಷಣೆಗೆ ವಿಳಂಬ ಮಾಡುತ್ತಿರುವ ಕಾರ್ಯವೈಖರಿ ಯನ್ನು ಎಸ್ಡಿಪಿಐ ಖಂಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ ಎಂದು ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ.ಸೈಯದ್ ದೂರಿದ್ದಾರೆ.
ಅವರು ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಹಾಗೂ ಚುನಾವಣಾ ಆಯೋಗ ಮಧ್ಯೆ ಅಸಹಜ ಪ್ರಕ್ರಿಯೆ ನಡೆಯುತ್ತಿದ್ದಂತೆ ಸಂಶಯ ಮೂಡುತ್ತಿದೆ ಎಂದರು.
ಚುನಾವಣಾ ಆಯೋಗ ಪ್ರಧಾನ ಮಂತ್ರಿಯನ್ನು ಖುಷಿ ಪಡಿಸಲು ಹೊರಟಿರುವ ಪರಿಣಾಮ ದೇಶದಪ್ರಜಾಪ್ರಭುತ್ವ ವ್ಯವಸ್ತೆಗೆ ಅಪಾಯಕಾರಿ ಯಾಗಿದೆ. ದೇಶವು ಸರ್ವಾಧಿಕಾರಿ ವ್ಯವಸ್ತೆಯತ್ತ ವಾಲುತ್ತಿದ್ದು, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳು ಸರಕಾರದ ಒತ್ತಡಗಳಿಗೆ ಮಣಿಯುತ್ತಿದೆ. ಈಗಿನ ಚುನಾವಣಾ ಆಯೋಗದ ಮುಖ್ಯಸ್ಥರು ಹಿಂದೆ ಗುಜರಾತ್ ಸರಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಎಂದು ದೂರಿದ್ದಾರೆ.
ಗುಜರಾತ್ನ ಜನರು ಮೋದಿ ಮತ್ತು ಅಲ್ಲಿಯ ಬಿಜೆಪಿ ಸರಕಾರದ ವಿರುದ್ಧವಾಗಿದ್ದಾರೆ. ದಲಿತರು, ಪಟೇಲರು ಹಾಗೂ ರೈತರು ಬಿಜೆಪಿಯ ಪರವಾಗಿಲ್ಲದಿರುವುದರಿಂದ ಅಲ್ಲಿ ಬಿಜೆಪಿ ತನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ಈಗಾಗಲೇ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ಅದಕ್ಕಾಗಿ ಬಿಜೆಪಿ ಚುನಾವಣೆಯ ಮುಂದೂಡಿಕೆಯನ್ನು ಬಯಸುತ್ತಿದೆ ಎಂದು ದೂರಿದ್ದಾರೆ.