ಕರ್ನಾಟಕ ತಂಡ ಪ್ರಕಟ; ವಿನಯ್ ಅಲಭ್ಯ
ವಿಜಯ್ ಹಝಾರೆ ಟ್ರೋಫಿ ಕ್ವಾರ್ಟರ್ ಫೈನಲ್
ಹೊಸದಿಲ್ಲಿ,ಫೆ.19: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯ ನಾಕೌಟ್ ಪಂದ್ಯಕ್ಕೆ ಕರ್ನಾಟಕ, ದಿಲ್ಲಿ ಹಾಗೂ ಮುಂಬೈ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ.
ಕರ್ನಾಟಕದ ಖಾಯಂ ನಾಯಕ ವಿನಯಕುಮಾರ್ ಮೊಣಕೈ ನೋವಿನಿಂದ ಬಳಲುತ್ತಿದ್ದು ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕರುಣ್ ನಾಯರ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಕರುಣ್ ನಾಯರ್
ಗೌತಮ್ ಗಂಭೀರ್ ಹಾಗೂ ಶ್ರೇಯಸ್ ಅಯ್ಯರ್ ಕ್ರಮವಾಗಿ ದಿಲ್ಲಿ ಹಾಗೂ ಮುಂಬೈ ತಂಡಕ್ಕೆ ವಾಪಸಾಗಿದ್ದಾರೆ. ಗಂಭೀರ್ ಮಂಡಿನೋವಿನಿಂದ ಬಳಲುತ್ತಿದ್ದ ಕಾರಣ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳಲ್ಲಿ ಆಡಿರಲಿಲ್ಲ. ಅಯ್ಯರ್ ದಕ್ಷಿಣ ಆಫ್ರಿಕದ ಪ್ರವಾಸದಿಂದ ವಾಪಸಾಗಿದ್ದು, ಮುಂಬೈ ತಂಡಕ್ಕೆ ಲಭ್ಯವಿದ್ದಾರೆ. ಅಯ್ಯರ್ ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದರು. ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿರಲಿಲ್ಲ.
ದಿಲ್ಲಿ ಫೆ.22 ರಂದು ಆಂಧ್ರದ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿದೆ. ಮುಂಬೈ ತಂಡ ಫೆ.21 ರಂದು ಮಹಾರಾಷ್ಟ್ರವನ್ನು ಹಾಗೂ ಕರ್ನಾಟಕ ತಂಡ ಅದೇ ದಿನ ಹೈದರಾಬಾದ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿದೆ.
ಕರ್ನಾಟಕ ತಂಡ:
ಕರುಣ್ ನಾಯರ್(ನಾಯಕ), ಮಾಯಾಂಕ್ ಅಗರವಾಲ್, ಸಮರ್ಥ್, ಸ್ಟುವರ್ಟ್ ಬಿನ್ನಿ, ಗೌತಮ್ ಸಿ.ಎಂ.(ವಿಕೆಟ್ಕೀಪರ್), ಪವನ್ ದೇಶಪಾಂಡೆ, ಗೌತಮ್ ಕೆ., ಶ್ರೇಯಸ್ ಗೋಪಾಲ್, ಪ್ರಸಿದ್ಧ ಕೃಷ್ಣ, ಅರವಿಂದ್ ಎಸ್. ರೋನಿತ್ ಮೋರೆ, ಸುಚಿತ್ ಜೆ. ಪ್ರದೀಪ್ ಟಿ. ದೇವದೂತ್ ಪಡಿಕಲ್ ಹಾಗೂ ಶರತ್ ಬಿ.ಆರ್.