ಭಾರತದ ಅಂಧ ಕ್ರಿಕೆಟಿಗರ ಬಗ್ಗೆ ಬಿಸಿಸಿಐ ಗಮನ ಹರಿಸಬೇಕು: ಬೇಡಿ
ಹೊಸದಿಲ್ಲಿ, ಮಾ.9: ಭಾರತದ ಸೀನಿಯರ್ ಕ್ರಿಕೆಟಿಗರ ವೇತನ ಹೆಚ್ಚಳ ಮಾಡಿರುವ ಬಿಸಿಸಿಐ ಭಾರತದ ಅಂಧ ಕ್ರಿಕೆಟ್ ಸಂಸ್ಥೆಯತ್ತಲೂ ಗಮನಹರಿಸಬೇಕು. ಈ ಮೂಲಕ ಭಾರತದ ಅಂಧ ಕ್ರಿಕೆಟಿಗರಿಗೆ ಉತ್ತೇಜನ ನೀಡಬೇಕು ಎಂದು ಭಾರತದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಹಾಗೂ ವಿಕೆಟ್ಕೀಪರ್ ಸೈಯದ್ ಕಿರ್ಮಾನಿ ಒತ್ತಾಯಿಸಿದ್ದಾರೆ.
‘ಅಪಘಾತದಲ್ಲಿ ಕಣ್ಣನ್ನು ಕಳೆದುಕೊಂಡಿದ್ದ ಟೈಗರ್ ಪಟೌಡಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ್ದರು. ಟೆಸ್ಟ್ ಕ್ರಿಕೆಟ್ಗೆ ಕಾಲಿಡುವ ಮೊದಲೇ ಅವರಿಗೆ ದೃಷ್ಟಿಯಿರಲಿಲ್ಲ. ಅದನ್ನು ಅವರು ಅಂಗವೈಕಲ್ಯ ಎಂದು ಭಾವಿಸಿರಲಿಲ್ಲ. ಅವರು ಭಾರತದ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು. ಅವರು ನವಾಬನಾದರೂ ಆ ರೀತಿ ವರ್ತಿಸಲಿಲ್ಲ. ಅಂಧ ಕ್ರಿಕೆಟಿಗರು ದೇಶದ ಎಲ್ಲ ಪ್ರಜೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಬಿಸಿಸಿಐ ಅಂಧರ ಕ್ರಿಕೆಟಿಗರನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಅವರಿಗೆ ಎಲ್ಲ ನೆರವು ನೀಡಬೇಕು’’ ಎಂದು ಬೇಡಿ ಹೇಳಿದರು. ‘‘ಅಂಧರ ಕ್ರಿಕೆಟಿಗರ ಸಾಧನೆಯ ಮುಂದೆ ನಾವು 1983ರಲ್ಲಿ ಗೆದ್ದಂತಹ ವಿಶ್ವಕಪ್ ಏನೂ ಅಲ್ಲ. ನಮ್ಮ ಅಂಧರ ಕ್ರಿಕೆಟಿಗರು ಎಲ್ಲರಿಗೂ ಹೀರೋಗಳು’’ ಎಂದು ಕೀರ್ಮಾನಿ ಹಾಗೂ ಮದನ್ ಲಾಲ್ ಹೇಳಿದ್ದಾರೆ.