ಕೌಂಟಿಯಲ್ಲಿ ಆಡಲು ಶ್ರೀಶಾಂತ್ ಮನವಿಗೆ ಬಿಸಿಸಿಐ ವಿರೋಧ
ಹೊಸದಿಲ್ಲಿ, ಮೇ 15: ಕೌಂಟಿ ತಂಡದಲ್ಲಿ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ತನಗೆ ಬಿಸಿಸಿಐ ಕ್ರಿಕೆಟ್ಗೆ ಆಡುವುದಕ್ಕೆ ವಿಧಿಸಿರುವ ಆಜೀವ ನಿಷೇಧವನ್ನು ತೆರವುಗೊಳಿಸುವಂತೆ ಶ್ರೀಶಾಂತ್ ಸುಪ್ರೀಂ ಕೋರ್ಟ್ಗೆ ಮಾಡಿರುವ ಮನವಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ.
2013ರಲ್ಲಿ ಐಪಿಎಲ್ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಶ್ರೀಶಾಂತ್ ವಿರುದ್ಧ ದೋಷ ಮುಕ್ತಗೊಳಿಸಿರುವುದರ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಿದೆ ಎಂದು ಬಿಸಿಸಿಐ ವಕೀಲರಾದ ಪರಾಗ್ ತ್ರಿಪಾಠಿ ತಿಳಿಸಿದರು.
ಶ್ರೀಶಾಂತ್ ಅವರು ಬುಕ್ಕಿಗಳೊಂದಿಗೆ ಸಂಪರ್ಕದಲ್ಲಿರುವ ವಿಚಾರ ಪ್ರಕರಣದ ತನಿಖೆಯ ವೇಳೆ ಬಹಿರಂಗಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಶ್ರೀಶಾಂತ್ ಪರ ವಕೀಲರಾದ ಸಲ್ಮಾನ್ ಖುರ್ಷಿದ್, ಶ್ರೀಶಾಂತ್ ಓರ್ವ ಅಸಾಮಾನ್ಯ ಕ್ರಿಕೆಟಿಗ. ಅವರಿಗೆ ಇಂಗ್ಲೆಂಡ್ನ ಕೌಂಟಿಯಲ್ಲಿ ಆಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಶ್ರೀಶಾಂತ್ ವಿರುದ್ಧದ ಆರೋಪ ಮುಕ್ತಗೊಳಿಸಿರುವ ಪ್ರಕರಣದ ಮೇಲ್ಮನವಿಗೆ ಬಗ್ಗೆ ಮುಂದಿನ ಜುಲೈ ಅಂತ್ಯದೊಳಗಾಗಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ಗೆ ಸೂಚಿಸಿದೆ. ಕ್ರಿಕೆಟ್ ಆಟದ ಬಗ್ಗೆ ಆಟಗಾರನ ಆತಂಕವನ್ನು ನ್ಯಾಯಾಲಯ ಅರ್ಥ ಮಾಡಿಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.