ಇಂದಿನಿಂದ ದುಲೀಪ್ ಟ್ರೋಫಿ ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್ಗೆ ಗ್ರೀನ್ ಎದುರಾಳಿ
ದಿಂಡಿಗಲ್, ಆ.16: ಇಂಡಿಯಾ ರೆಡ್ ಹಾಗೂ ಇಂಡಿಯಾ ಗ್ರೀನ್ ತಂಡಗಳು ಮುಖಾಮುಖಿಯಾಗುವ ಮೂಲಕ 57ನೇ ಆವೃತ್ತಿಯ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಶುಕ್ರವಾರ ಇಲ್ಲಿ ಆರಂಭವಾಗಲಿದೆ. ಈ ಮೂಲಕ 2018-19ರ ಸಾಲಿನ ದೇಶೀಯ ಋತುವಿಗೆ ಚಾಲನೆ ಸಿಗಲಿದೆ.
ಟೂರ್ನಿಯಲ್ಲಿ ಇಂಡಿಯಾ ರೆಡ್, ಇಂಡಿಯಾ ಬ್ಲ್ಯೂ ಹಾಗೂ ಇಂಡಿಯಾ ಗ್ರೀನ್ ತಂಡಗಳು ಭಾಗವಹಿಸಲಿದ್ದು, ಮೂರು ತಂಡಗಳಲ್ಲಿ ಅನುಭವಿ ಆಟಗಾರರು, ಪ್ರತಿಭಾವಂತ ಯುವ ಆಟಗಾರರ ಮಿಶ್ರಣವಿದೆ. ಪಂದ್ಯವು ಗುಲಾಬಿ ಬಣ್ಣದ ಚೆಂಡಿನಲ್ಲಿ ಹಗಲು-ರಾತ್ರಿ ನಡೆಯಲಿದೆ.
ನಾಲ್ಕು ದಿನಗಳ ಪಂದ್ಯ ಮೂರು ಸುತ್ತಿನ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಸೆ.4 ರಂದು ಫೈನಲ್ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯವು ಐದು ದಿನ ನಡೆಯುವುದು.
ಕೆಲವು ಆಟಗಾರರಿಗೆ ಟೀಮ್ ಇಂಡಿಯಾಕ್ಕೆ ವಾಪಸಾಗಲು ಈ ಟೂರ್ನಿಯು ಒಂದು ವೇದಿಕೆಯಾಗಿದೆ. ಇಂಡಿಯಾ ರೆಡ್ ನಾಯಕ ಅಭಿನವ್ ಮುಕುಂದ್ ಉತ್ತಮ ಪ್ರದರ್ಶನ ನೀಡಿದರೆ ಈಗ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಉತ್ತಮ ಆರಂಭಿಕ ಆಟಗಾರರ ಸಮಸ್ಯೆ ಎದುರಿಸುತ್ತಿರುವ ಭಾರತಕ್ಕೆ ಅನುಕೂಲಕರವಾಗಲಿದೆ.
ಇಂಡಿಯಾ ಗ್ರೀನ್ ತಂಡದ ನಾಯಕ ಪಾರ್ಥಿವ್ ಪಟೇಲ್ಗೆ ಕೀಪರ್ ವೃದ್ದಿಮಾನ್ ಸಹಾ ಅನುಪಸ್ಥಿತಿ ಹಾಗೂ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ವಾಪಸಾಗುವ ಅವಕಾಶವಿದೆ.
ಬಾಸಿಲ್ ಥಾಂಪಿ, ಧವಳ್ ಕುಲಕರ್ಣಿ, ಪರ್ವೆಝ್ ರಸೂಲ್ ಹಾಗೂ ರಜನೀಶ್ ಗುರ್ಬಾನಿ, ಇಂಡಿಯಾ ಗ್ರೀನ್ ತಂಡದ ನಾಯಕ ಫೈಝ್ ಫಝಲ್, ಜೈದೇವ್ ಉನದ್ಕಟ್ಗೆ ರಾಷ್ಟ್ರೀಯ ತಂಡಕ್ಕೆ ವಾಪಾಗಲು ದುಲೀಪ್ ಟ್ರೋಫಿ ರಹದಾರಿಯಾಗಿದೆ.