ಆಮ್ಸ್ಟರ್ಡಂನಲ್ಲಿ ಪಾಸ್ಪೋರ್ಟ್ ಕಳೆದುಕೊಂಡ ಕಶ್ಯಪ್
ಸುಶ್ಮಾ ಸ್ವರಾಜ್ ರಲ್ಲಿ ಸಹಾಯಕ್ಕೆ ಮನವಿ
ಹೈದರಾಬಾದ್,ಅ.13: ಭಾರತದ ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ಹಾಲೆಂಡ್ನ ರಾಜಧಾನಿ ಆಮ್ಸ್ಟರ್ಡಂನಲ್ಲಿ ತನ್ನ ಪಾಸ್ಪೋರ್ಟ್ ಕಳೆದುಕೊಂಡಿದ್ದು ತನಗೆ ನೆರವಾಗುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ಗೆ ಮನವಿ ಮಾಡಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತ ಆಟಗಾರ ಕಶ್ಯಪ್ ಶನಿವಾರ ತನ್ನ ಪಾಸ್ಪೋರ್ಟ್ನ್ನು ಕಳೆದುಕೊಂಡಿದ್ದರು. ಈ ಕುರಿತು ಸುಶ್ಮಾ ಸ್ವರಾಜ್ಗೆ ಟ್ವೀಟ್ ಮಾಡಿದ ಕಶ್ಯಪ್, ತಾನು ಯೂರೋಪ್ನಾದ್ಯಂತ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕಾಗಿರುವ ಕಾರಣ ಕೂಡಲೇ ಪರ್ಯಾಯ ಪಾಸ್ಪೋರ್ಟ್ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಟ್ವೀಟ್ನಲ್ಲಿ ಅವರು ಪ್ರಧಾನಿ ಮೋದಿ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಟ್ಯಾಗ್ ಮಾಡಿದ್ದರು. ನಾನು ಆಮ್ಸ್ಟರ್ಡಂನಲ್ಲಿ ಕಳೆದ ರಾತ್ರಿ ನನ್ನ ಪಾಸ್ಪೋರ್ಟ್ನ್ನು ಕಳೆದುಕೊಂಡಿದ್ದೇನೆ. ನಾನು ಮುಂದಿನ ದಿನಗಳಲ್ಲಿ ಡೆನ್ಮಾರ್ಕ್ ಓಪನ್, ಫ್ರೆಂಚ್ ಓಪನ್ ಮತ್ತು ಸಾರ್ಲೊಕ್ಸ್ ಓಪನ್ನಲ್ಲಿ ಭಾಗವಹಿಸಬೇಕಿದೆ. ಡೆನ್ಮಾರ್ಕ್ಗೆ ತೆರಳಲು ಅಕ್ಟೋಬರ್14, ರವಿವಾರದ ವಿಮಾನ ಟಿಕೆಟ್ ನಿಗದಿಯಾಗಿದೆ. ಹಾಗಾಗಿ ನನಗೆ ಸಹಾಯ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಕಶ್ಯಪ್ ತನ್ನ ಟ್ವೀಟ್ನಲ್ಲಿ ತಿಳಿಸಿದ್ದರು.