ಅಮಾನತಿನಲ್ಲಿರುವ ಹಾರ್ದಿಕ್, ರಾಹುಲ್ ಭಾರತಕ್ಕೆ ವಾಪಸ್?
ಹೊಸದಿಲ್ಲಿ/ಸಿಡ್ನಿ, ಜ.11: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ರನ್ನು ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗಿಡಲು ನಿರ್ಧರಿಸಿರುವ ಬಿಸಿಸಿಐ, ತಕ್ಷಣವೇ ಅವರನ್ನು ಸ್ವದೇಶಕ್ಕೆ ಬರುವಂತೆ ತಾಕೀತು ಮಾಡಿದೆ ಎನ್ನಲಾಗಿದೆ.
ಶುಕ್ರವಾರ ಇಬ್ಬರು ಆಟಗಾರರ ವಿರುದ್ಧ ವಿಚಾರಣೆಯನ್ನು ಕಾಯ್ದಿರಿಸಿ ಮೊದಲ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು ಎಂದು ಆಡಳಿತಾಧಿಕಾರಿ ಸಮಿತಿ ಅಧ್ಯಕ್ಷ ವಿನೋದ್ ರಾಯ್ ಪಿಟಿಐಗೆ ತಿಳಿಸಿದ್ದರು.
''ಇಬ್ಬರೂ ಆಟಗಾರರನ್ನು ಆಸ್ಟ್ರೇಲಿಯದಿಂದ ಭಾರತಕ್ಕೆ ಕಳುಹಿಸಲು ನಿರ್ಧರಿಸಲಾಗಿದ್ದು, ಮೊದಲ ವಿಮಾನದಲ್ಲೇ ಸ್ವದೇಶಕ್ಕೆ ವಾಪಸಾಗಲು ಸೂಚಿಸಲಾಗಿದೆ’’ ಎಂದು ರಾಯ್ ಹೇಳಿಕೆಯ ಕೆಲವೇ ಗಂಟೆಯ ಬಳಿಕ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಈ ಇಬ್ಬರು ಆಟಗಾರರು ನ್ಯೂಝಿಲೆಂಡ್ ವಿರುದ್ದ ಸೀಮಿತ ಓವರ್ ಸರಣಿಗೆ ತಂಡದೊಂದಿಗೆ ತೆರಳುವ ಸಾಧ್ಯತೆಯೂ ಕ್ಷೀಣಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕೃತ ವಿಚಾರಣೆ ಆರಂಭಕ್ಕೆ ಮೊದಲು ಇಬ್ಬರೂ ಆಟಗಾರರಿಗೆ ಮತ್ತೊಮ್ಮೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಪಾಂಡ್ಯ ಎರಡು ಬಾರಿ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರೆ, ರಾಹುಲ್ ಈತನಕ ಪ್ರತಿಕ್ರಿಯೆ ನೀಡಿಲ್ಲ