ನನ್ನ ಪತ್ನಿ, ಪುತ್ರಿ ಇದ್ದಾಗ ಪಾಂಡ್ಯಾ, ರಾಹುಲ್ ಜೊತೆ ಪ್ರಯಾಣಿಸಲ್ಲ ಎಂದ ಭಾರತದ ಕ್ರಿಕೆಟಿಗ
ಮುಂಬೈ, ಜ.12: ‘ಕಾಫಿ ವಿದ್ ಕರಣ್’ ಟಿವಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಸಾಕಷ್ಟು ವಿವಾದಕ್ಕೀಡಾಗಿರುವಂತೆಯೇ ಟೀಂ ಇಂಡಿಯಾ ಸದಸ್ಯರೂ ಅವರ ವಿರುದ್ಧ ಕೆಂಡ ಕಾರಲಾರಂಭಿಸಿದ್ದಾರೆ.
ಸ್ಪಿನ್ನರ್ ಹರ್ಭಜನ್ ಸಿಂಗ್ ಸಿಟ್ಟಿನಿಂದ ಪ್ರತಿಕ್ರಿಯಿಸಿ, “ನೀವೇ ಹೇಳಿ ನಾಳೆ ನೀವು ಅವರನ್ನು ಪಾರ್ಟಿಯಲ್ಲಿ ಭೇಟಿಯಾದರೆ ಅವರ ಜತೆ ನಿಮಗೆ ಮಾತನಾಡಬೇಕೆಂದು ಅನಿಸುತ್ತದೆಯೇ?, ನಾನಂತೂ ಮಾತನಾಡುವುದಿಲ್ಲ, ನನ್ನ ಪತ್ನಿ ಮತ್ತು ಮಗಳು ಕೂಡ ನನ್ನ ಜತೆಗಿರುವಾಗ ಟೀಂ ಬಸ್ ನಲ್ಲಿ ನಾನು ಅವರಿಬ್ಬರ ಜತೆ ಪ್ರಯಾಣಿಸಲು ಇಚ್ಛಿಸುವುದಿಲ್ಲ'' ಎಂದು ಹೇಳಿದ್ದಾರೆ.
``ಅವರು (ಹಾರ್ದಿಕ್) ನಮ್ಮೆಲ್ಲರ ಪ್ರತಿಷ್ಠೆಯನ್ನು ಪಣವಾಗಿಟ್ಟಿದ್ದಾರೆ. ನಮ್ಮ ತಂಡದಲ್ಲಿ ಈ ರೀತಿಯ ಸಂಸ್ಕೃತಿ ಸೃಷ್ಟಿಸಿಯೇ ಇಲ್ಲ,'' ಎಂದು ತಮ್ಮ ಮಾಜಿ ಮುಂಬೈ ಇಂಡಿಯನ್ಸ್ ಸಹೋದ್ಯೋಗಿಯ ಬಗ್ಗೆ ಹರ್ಭಜನ್ ಹೇಳಿದ್ದಾರೆ. “ತಂಡದಲ್ಲಿ ಈ ಇಬ್ಬರು ಆಟಗಾರರು ಬೇಡವೆಂದು ವಿರಾಟ್ ಕೊಹ್ಲಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ಬೇರೆ ವಿಚಾರ,'' ಎಂದು ಹರ್ಭಜನ್ ಹೇಳಿದ್ದಾರೆ.
ಇಬ್ಬರನ್ನೂ ಬಿಸಿಸಿಐ ವಜಾಗೊಳಿಸಿದ್ದು ಅವರು ಭಾರತದಲ್ಲಿ ತೀವ್ರ ಪ್ರತಿರೋಧ ಎದುರಿಸಬಹುದೆಂಬ ಕಾರಣಕ್ಕೆ ಇಬ್ಬರೂ ಆಸ್ಟ್ರೇಲಿಯಾದಲ್ಲೇ ಇರಲಿ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.