ಈಜುಪಟು ನಟರಾಜ್ ಚಿತ್ತ ವಿಶ್ವ ಚಾಂಪಿಯನ್ಶಿಪ್ ನತ್ತ
ಬೆಂಗಳೂರು, ಜ.16: ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ನೂರು ಪ್ರತಿಶತ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ ಮುಂಬರುವ ವಿಶ್ವ ಚಾಂಪಿಯನ್ಶಿಪ್ನತ್ತ ಚಿತ್ತಹರಿಸಿದ್ದಾರೆ. ನಟರಾಜ್ ಈ ವರ್ಷದ ಗೇಮ್ಸ್ನಲ್ಲಿ ಭಾಗವಹಿಸಿದ್ದ ಎಲ್ಲ 7 ಸ್ಪರ್ಧೆಗಳಲ್ಲಿ ಚಿನ್ನ ಜಯಿಸಿ ಮಿಂಚಿದ್ದಾರೆ. ಕಳೆದ ವರ್ಷದ ಗೇಮ್ಸ್ನಲ್ಲಿ 6 ಚಿನ್ನ ಗೆದ್ದುಕೊಂಡಿದ್ದ ನಟರಾಜ್ ಈ ಬಾರಿ ತನ್ನ ಪ್ರದರ್ಶನ ಉತ್ತಮಪಡಿಸಿಕೊಂಡಿದ್ದಾರೆ.
ಕರ್ನಾಟಕದ ಇನ್ನೋರ್ವ ಸ್ವಿಮ್ಮರ್ಲಿಖಿತ್ ಎಸ್.ಪಿ. ಯೂತ್ ಗೇಮ್ಸ್ನಲ್ಲಿ ಐದು ಚಿನ್ನ ಸಹಿತ ಆರು ಪದಕಗಳನ್ನು ಜಯಿಸಿ ತನ್ನ ಅಭಿಯಾನ ಕೊನೆಗೊಳಿಸಿದ್ದಾರೆ.
2018ರ ಯೂತ್ ಒಲಿಂಪಿಕ್ಸ್ ಹಾಗೂ ಏಶ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ನಟರಾಜ್ ಈ ವರ್ಷಾಂತ್ಯದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನತ್ತ ಗಮನಹರಿಸಿದ್ದಾರೆ. ಈ ಟೂರ್ನಿಯಲ್ಲಿ ದೇಶಕ್ಕೆ ಹೆಮ್ಮೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನಗೆ ಕೆಲವು ಪರೀಕ್ಷೆಗಳನ್ನು ಮುಗಿಸಲು ಬಾಕಿಯಿದೆ. ಆ ಬಳಿಕ ವಿಶ್ವ ಚಾಂಪಿಯನ್ಶಿಪ್ಗೆ ನನ್ನ ಸಿದ್ಧತೆ ಆರಂಭಿಸುತ್ತೇನೆ ಎಂದು ನಟರಾಜ್ ಹೇಳಿದ್ದಾರೆ.