ಸಿಂಗಾಪುರವನ್ನು ಸೋಲಿಸಿದ ಭಾರತ
ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್
ಯೋಗ್ಯಕರ್ತ(ಇಂಡೋನೇಶ್ಯ), ಸೆ.17: ಐಟಿಟಿಎಫ್ ಏಶ್ಯನ್ ಟೇಬಲ್ ಚಾಂಪಿಯನ್ಶಿಪ್ನ 5-8 ವರ್ಗೀಕರಣ ಪಂದ್ಯದಲ್ಲಿ ಭಾರತೀಯ ಪುರುಷರ ತಂಡ ಸಿಂಗಾಪುರ ತಂಡವನ್ನು 3-0 ಅಂತರದಿಂದ ಮಣಿಸಿತು. ಈ ಮೂಲಕ ಕಾಂಟಿನೆಂಟಲ್ ಇವೆಂಟ್ನಲ್ಲಿ ಚಾಂಪಿಯನ್ಸ್ ವಿಭಾಗದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿತು.
ಭಾರತ ಸೋಮವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ ವಿರುದ್ಧ 1-3 ಅಂತರದಿಂದ ಸೋತಿತ್ತು. ಮಂಗಳವಾರ ಸಿಂಗಾಪುರ ವಿರುದ್ಧ ಜಯ ಸಾಧಿಸಿರುವ ಭಾರತ ಟೂರ್ನಮೆಂಟ್ನಲ್ಲಿ ಅಗ್ರ-6ರಲ್ಲಿ ಸ್ಥಾನ ಪಡೆದಿದೆ. 2021ರಲ್ಲಿ ನಡೆಯಲಿರುವ ಮುಂದಿನ ಚಾಂಪಿಯನ್ಶಿಪ್ನಲ್ಲಿ ನೇರ ಪ್ರವೇಶ ಪಡೆಯಲಿದೆ.
ಭಾರತ ಬುಧವಾರ ಐದನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಸತ್ಯನ್ ಸಿಂಗಾಪುರದ ಪೊಹ್ ಶಾವೊ ಫೆಂಗ್ ಎಥಾನ್ ವಿರುದ್ಧ 11-5, 11-5,13-11 ಸೆಟ್ಗಳಿಂದ ಜಯ ಸಾಧಿಸಿದರು. ಹಿರಿಯ ಆಟಗಾರ ಶರತ್ ಕಮಲ್ ತನ್ನ ದೀರ್ಘ ಅನುಭವವನ್ನು ಬಳಸಿಕೊಂಡು ಪಾಂಗ್ ಯಿವ್ ಎನ್ ಕೊಯೆನ್ರನ್ನು 7-11,13-11, 9-11, 11-9, 11-3 ಅಂತರದಿಂದ ಮಣಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಮೂರನೇ ಆಯ್ಕೆಯ ಆಟಗಾರ ಅಂಥೋನಿ ಅಮಲ್ರಾಜ್, ಮಾಜಿ ರಾಷ್ಟ್ರೀಯ ಚಾಂಪಿಯನ್ ಚುಯಾ ಜೋಶ್ ಶಾವೊ ಹಾನ್ರನ್ನು 7-1, 11-7, 15-13, 11-9 ಅಂತರದಿಂದ ಸೋಲುಣಿಸಿ ಭಾರತ 3-0 ಅಂತರದಿಂದ ಪಂದ್ಯ ಗೆಲ್ಲಲು ನೆರವಾದರು. ಸೋಮವಾರ ಭಾರತೀಯ ಮಹಿಳಾ ಟಿಟಿ ತಂಡ ಮಲೇಶ್ಯವನ್ನು 3-0 ಅಂತರದಿಂದ ಮಣಿಸಿ ಟೂರ್ನಿಯಲ್ಲಿ 9ನೇ ಸ್ಥಾನ ಪಡೆಯಿತು.