ಪ್ಲೇ-ಆಫ್ಗೆ ಮೀಸಲು ದಿನ ಅಗತ್ಯವಿದೆ: ಶಾರೂಕ್ಖಾನ್
ಕೋಲ್ಕತಾ,ಮೇ 19: ಹಾಲಿ ಚಾಂಪಿಯನ್ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಬುಧವಾರ ತಡರಾತ್ರಿ ಬೆಂಗಳೂರಿನಲ್ಲಿ ಅಂತ್ಯಗೊಂಡ ಐಪಿಎಲ್ನ ಎಲಿಮಿನೇಟರ್ ಪಂದ್ಯದ ಬಗ್ಗೆ ಉಭಯ ತಂಡಗಳು ಟೀಕೆ ವ್ಯಕ್ತಪಡಿಸಿವೆ.
ಐಪಿಎಲ್ ಪ್ಲೇ-ಆಫ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಮೀಸಲು ದಿನವನ್ನು ನಿಗದಿಪಡಿಸುವ ವ್ಯವಸ್ಥೆ ಇರಬೇಕು ಎಂದು ಕೆಕೆಆರ್ ತಂಡದ ಸಹ ಮಾಲಕ ಶಾರೂಕ್ ಖಾನ್ ಆಗ್ರಹಿಸಿದ್ದಾರೆ.
‘‘ಬುಧವಾರ ರಾತ್ರಿ ಕೊನೆಗೊಂಡ ಎಲಿಮಿನೇಟರ್ ಪಂದ್ಯದಲ್ಲಿ ನಮ್ಮ ತಂಡ ಗೆಲುವು ಸಾಧಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ಲೇ-ಆಫ್ ಹಂತದಲ್ಲಿ ಮೀಸಲು ದಿನ ನಿಗದಿಪಡಿಸುವ ಅವಶ್ಯಕತೆಯಿದೆ. ಒಂದು ವೇಳೆ ಪಂದ್ಯ ರದ್ದುಗೊಂಡ ಸಂದರ್ಭದಲ್ಲಿ ಇದು ಪ್ರಯೋಜನಕ್ಕೆ ಬರುತ್ತದೆ’’ಎಂದು ಶಾರೂಕ್ ಖಾನ್ ಹೇಳಿದ್ದಾರೆ.
‘‘ಐಪಿಎಲ್ ಪಂದ್ಯಗಳು ತಡರಾತ್ರಿ ಕೊನೆಗೊಂಡಿರುವುದು ಚಿಂತೆಯ ವಿಷಯವಾಗಿದೆ. ಶಾರೂಕ್ ಖಾನ್ ಮೀಸಲು ದಿನದ ಆಯ್ಕೆಯ ಬಗ್ಗೆ ಪ್ರಸ್ತಾವಿಸಿದ್ದಾರೆ. ನಾವು ಎಲ್ಲ ಆಯ್ಕೆಯನ್ನು ನೋಡಲಿದ್ದು, ಐಪಿಎಲ್ ಆಡಳಿತ ಮಂಡಳಿ ಈ ಕುರಿತು ಗಮನಹರಿಸಲಿದೆ’’ ಎಂದು ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.