ಹೊಸ ಕೋಚ್ ಹುಡುಕಾಟದಲ್ಲಿ ಬಿಸಿಸಿಐ: ರವಿ ಶಾಸ್ತ್ರಿಗೆ ಮತ್ತೆ ಬಾಗಿಲು ತೆರೆಯುವುದೇ?
ಹೊಸದಿಲ್ಲಿ, ಜೂ.22: ಭಾರತೀಯ ಕ್ರಿಕೆಟ್ ತಂಡಕ್ಕೆ ನೂತನ ಪ್ರಧಾನ ಕೋಚ್ ಅಭ್ಯರ್ಥಿ ಆಯ್ಕೆ ಮಾಡುವ ಹೊಣೆಗಾರಿಕೆ ಹೊತ್ತಿರುವ ಕ್ರಿಕೆಟ್ ಆಯ್ಕೆ ಸಮಿತಿಗೆ(ಸಿಎಸಿ) ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲದೆ ಇನ್ನಷ್ಟು ಅಭ್ಯರ್ಥಿಗಳನ್ನು ಆರಿಸಲು ಬಿಸಿಸಿಐ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಿಸಿಸಿಐಯ ಈ ನಿರ್ಧಾರದಿಂದಾಗಿ ರವಿ ಶಾಸ್ತ್ರಿ ಅವರಿಗೆ ಮತ್ತೊಮ್ಮೆ ಭಾರತ ತಂಡದಲ್ಲಿ ಸೇವೆ ಸಲ್ಲಿಸುವ ಅವಕಾಶವೊಂದು ಒದಗಿಬಂದಿದೆ. ಕೋಚ್ ಹುದ್ದೆಗೆ ಶಾಸ್ತ್ರಿ ಅವರು ನಾಯಕ ಕೊಹ್ಲಿಯ ಮೊದಲ ಆಯ್ಕೆಯಾಗಿದ್ದಾರೆ.
ಶಾಸ್ತ್ರಿ ಸ್ಪರ್ಧೆಗೆ ಇಳಿದರೆ ಈಗಾಗಲೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಲಾಲ್ಚಂದ್ ರಾಜ್ಪೂತ್ ಹಾಗೂ ದೊಡ್ಡ ಗಣೇಶ್ ಅವರ ಹಾದಿ ಕಠಿಣವಾಗಲಿದೆ.
ಕೋಚ್ ಹುದ್ದೆಗೆ ಮತ್ತಷ್ಟು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ಬಿಸಿಸಿಐ ನಿರ್ಧಾರದ ಹಿಂದೆ ಭಾರತದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅವರನ್ನು ಕೋಚ್ರನ್ನಾಗಿಸುವ ಹುನ್ನಾರವೂ ಇದೆ ಎಂದು ಮೂಲಗಳು ತಿಳಿಸಿವೆ.
ಸಿಎಸಿಗೆ ವೆಸ್ಟ್ಇಂಡೀಸ್ ಸರಣಿ ಕೊನೆಗೊಂಡ ಬಳಿಕ ಶ್ರೀಲಂಕಾ ಸರಣಿಗೆ ಮೊದಲು ಹೊಸ ಕೋಚ್ರನ್ನು ಆಯ್ಕೆ ಮಾಡಬೇಕಾಗಿದ್ದು, ಸಾಕಷ್ಟು ಸಮಯಾವಕಾಶವಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಕುರಿತು ಬಿಸಿಸಿಐ ತೃಪ್ತವಾಗಿಲ್ಲ ಎನ್ನಲಾಗಿದೆ.
ಸೆಹ್ವಾಗ್ಗೆ ಕೋಚಿಂಗ್ ನೀಡಿದ ಅನುಭವವಿಲ್ಲ. ಕಲಿಕೆಯ ತಂತ್ರಗಾರಿಕೆ ವಿಷಯದಲ್ಲಿ ಅವರು ಸರಿಯಾದ ವ್ಯಕ್ತಿಯಲ್ಲ ಎಂದು ಮೂಲವೊಂದು ತಿಳಿಸಿದೆ.