ಖೇಲ್ ರತ್ನ ಗೌರವಕ್ಕೆ ಪ್ಯಾರಾಲಿಂಪಿಯನ್ ದೇವೇಂದ್ರ ಝಝಾರಿಯಾ ಹೆಸರು ಶಿಫಾರಸು
ಹೊಸದಿಲ್ಲಿ, ಆ.3: ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದ ದೇವೇಂದ್ರ ಝಝಾರಿಯಾರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋದಲ್ಲಿ ಚಿನ್ನ ಗಳಿಸಿದ್ದ ಝಝಾರಿಯಾ 2004ರಲ್ಲಿ ನಡೆದ ಅಥೆನ್ಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಚಿನ್ನ ಗಳಿಸಿದ್ದರು.
ಖೇಲ್ ರತ್ನ ಪ್ರಶಸ್ತಿಗಾಗಿ ಹಾಕಿ ತಾರೆ ಸರ್ದಾರ್ ಸಿಂಗ್ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ.
ಇದೇ ರೀತಿ ಈ ಸಾಲಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗಾಗಿ ಕ್ರಿಕೆಟಿಗರಾದ ಚೇತೇಶ್ವರ ಪೂಜಾರ, ಹರ್ಮನ್ ಪ್ರೀತ್ ಕೌರ್ ಸಹಿತ 12 ಕ್ರೀಡಾಳುಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಪೂಜಾರ ಅವರು ಸದ್ಯ ಅತ್ಯುನ್ನತ ಫಾರ್ಮ್ ನಲ್ಲಿದ್ದು ತಾವಾಡಿದ 50ನೇ ಪಂದ್ಯದಲ್ಲಿ 4,000 ರನ್ ಗಳನ್ನು ಪೂರೈಸಿದ್ದಾರೆ.
ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡ ಇತರ ಹೆಸರುಗಳೆಂದರೆ ಸಾಕೇತ್ ಮೈನೇನಿ, ಮರಿಯಪ್ಪನ್, ವಿ.ಜೆ. ಶ್ವೇತಾ, ಖುಷ್ಬೀರ್ ಕೌರ್, ಆರೋಕಿಯ ರಾಜೀವ್, ಪ್ರಶಾಂತಿ ಸಿಂಗ್, ಎಸ್.ವಿ. ಸುನಿಲ್, ಎಸ್.ಎಸ್. ಪಿ ಚೌರಾಸಿಯಾ, ಸತ್ಯವೃತ ಕಡಿಯನ್, ಆಂಟನಿ ಅಮಲರಾಜ್, ಪಿ.ಎನ್. ಪ್ರಕಾಶ್, ಜಸ್ವೀರ್ ಸಿಂಗ್, ದೇವೇಂದ್ರೊ ಸಿಂಗ್, ಬಿಂಬಾ ದೇವಿ ಮತ್ತು ವರುಣ್ ಭಾಟಿ.