ಬರಪೀಡಿತ ರೈತರ ಸಹಾಯಕ್ಕೆ ತೆಂಡುಲ್ಕರ್ ನಿರ್ಧಾರ
ಮುಂಬೈ, ಫೆ.23: ಭಾರತದ ಬ್ಯಾಟಿಂಗ್ ಐಕಾನ್ ಸಚಿನ್ ತೆಂಡುಲ್ಕರ್ ಸಮಾಜ ಪರ ಕಾರ್ಯಕ್ಕೆ ಸದಾ ಸಿದ್ಧರಾಗಿರುತ್ತಾರೆ. ಇದೀಗ ಅವರು ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ರೈತರಿಗೆ ಸಹಾಯ ಹಸ್ತ ಚಾಚಲು ನಿರ್ಧರಿಸಿದ್ದಾರೆ. 42ರ ಹರೆಯದ ತೆಂಡುಲ್ಕರ್ ಅವರು ಮರಾಠವಾಡದಲ್ಲಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಆ ಪ್ರದೇಶದಲ್ಲಿ ನೀರು ಹಾಗೂ ವಿದ್ಯುತ್ ಬರ ನೀಗಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಅಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸುವ ಇರಾದೆಯನ್ನೂ ಹೊಂದಿದ್ದಾರೆ.
ತೆಂಡುಲ್ಕರ್ರ ಆಪ್ತ ಸಹಾಯಕ ಇತ್ತೀಚೆಗೆ ಮರಾಠವಾಡಕ್ಕೆ ಭೇಟಿ ನೀಡಿ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಈ ಕಾರ್ಯದ ಹಿಂದೆ ಯಾವುದೇ ರಾಜಕೀಯ ಪ್ರಭಾವವಿಲ್ಲ ಎಂದು ತೆಂಡುಲ್ಕರ್ ಆಪ್ತ ಸಹಾಯಕ ಹೇಳಿದ್ದಾರೆ.
ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ತೆಂಡುಲ್ಕರ್ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಶತಕ, ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯೂ ತೆಂಡುಲ್ಕರ್ ಹೆಸರಲ್ಲಿದೆ.