ತೋಟಗಾರಿಕಾ ಇಲಾಖೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಉಡುಪಿ, ಮೇ 20: ತೋಟಗಾರಿಕೆ ಬೆಳೆಗಳಿಗೆ ಅನುಮೋದಿತ ಕಂಪನಿ ಅಥವಾ ಡೀಲರ್ಗಳಿಂದ ಹೊಸದಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಸುವ ರೈತರಿಗೆ ಇಲಾಖೆಯಿಂದ ಸಹಾಯಧನ ಲಭ್ಯವಿದ್ದು ಪ್ರತಿ ಫಲಾನುಭವಿಯು ಗರಿಷ್ಟ 5 ಹೆ.ವರೆಗೂ ಸಹಾಯಧನ ಪಡೆಯಬಹುದಾಗಿದೆ. ಮೊದಲ 2 ಹೆ.ಗೆ ಶೇ.90 ಹಾಗೂ ನಂತರದ 3 ಹೆ.ಗೆ ಶೇ.35 ಸಹಾಯಧನ ಲಭ್ಯವಿದೆ.
2017-18ನೆ ಸಾಲಿನಲ್ಲಿ ಅಧಿಕ ಇಳುವರಿ ನೀಡುವ ಗೇರು ತಳಿಗಳನ್ನು ನಾಟಿ ಮಾಡಲು ಸಹಾಯಧನ ಲಭ್ಯವಿದ್ದು, ಪ್ರತಿ ಫಲಾನುಭವಿಗೆ ಕನಿಷ್ಠ 0.4 ಹೆಕ್ಟೇರ್ನಿಂದ 2 ಹೆಕ್ಟೇರ್ವರೆಗೆ ಸಹಾಯಧನ ನೀಡಲು ಅವಕಾಶವಿದೆ. ಗೇರು ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಾಮಾನ್ಯ ರೈತರಿಗೆ ಒಟ್ಟು ಘಟಕ ವೆಚ್ಚದ ಶೇ.50ರಂತೆ ಪ್ರತಿ ಹೆಕ್ಟೇರ್ಗೆ 26050ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಒಟ್ಟು ಘಟಕ ವೆಚ್ಚದ ಶೆ.90ರಂತೆ ಪ್ರತಿ ಹೆಕ್ಟೇರ್ಗೆ 46890ರೂ. ಸಹಾಯಧನ ನೀಡಲು ಅವಕಾಶವಿದೆ.
ಗೇರು ತೋಟವನ್ನು ಹೊಸದಾಗಿ ನಾಟಿ ಮಾಡಲು ಉದ್ದೇಶಿಸಿರುವ ರೈತರು ಅರ್ಜಿ, ಪಹಣಿ ಹಾಗೂ ಆಧಾರ್ ಕಾರ್ಡ್ನ ಪ್ರತಿಯೊಂದಿಗೆ ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನೊಂದಾಯಿಸಿಕೊಳ್ಳಬಹುದಾಗಿದೆ. ಹಳೆಯ, ಅನುತ್ಪಾದಕ, ಕೀಟ-ರೋಗ ಬಾಧಿತ, ತೇವಾಂಶ ಮತ್ತು ಪೋಷಕಾಂಶ ಕೊರತೆ ಇರುವ ಮತ್ತು ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತವಾಗಿರುವ ತೆಂಗಿನ ತೋಟಗಳಲ್ಲಿ ಪುನ: ಹೊಸದಾಗಿ ತೆಂಗಿನ ಸಸಿಗಳನ್ನು ನೆಡುವುದು, ಪುನ:ಶ್ಚೇತನ ಮಾಡುವುದು ಹಾಗೂ ಸಮಗ್ರ ನೀರು, ಮಣ್ಣು ಹಾಗೂ ಪೋಷಕಾಂಶ ನಿರ್ವ ಹಣಾ ಪದ್ದತಿಯನ್ನು ಕೈಗೊಳ್ಳುವ ರೈತರಿಗೆ ಒಟ್ಟು ವೆಚ್ಚದ ಶೇ.50ರಂತೆ ಗರಿಷ್ಠ 53500ರೂ. ಪ್ರತಿ ಹೆಕ್ಟೇರ್ಗೆ ಸಹಾಯಧನವಿದ್ದು 2 ಕಂತುಗಳಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಮೇಲಿನ ಯೋಜನೆಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಗ್ಗೂಡಿಸಿಕೊಂಡು ಮಾಡಲು ಅವಕಾಶವಿದೆ. ಆಸಕ್ತ ರೈತರು ಹೊಸ ಪಹಣಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಅರ್ಜಿಯನ್ನು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಪಂರವರಿಗೆ ಸಲ್ಲಿಸಿ ದಾಖಲು ಮಾಡಲು ಕೋರಿದೆ. ಅರ್ಜಿಗಳನ್ನು ಯೋಜನೆಯ ಮಾರ್ಗಸೂಚಿ ಹಾಗೂ ಜೇಷ್ಟತೆಯ ಅಧಾರದಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿ ಸಲು ಮೇ 31 ಕೊನೆಯ ದಿನಾಂಕ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು,(ಜಿಪಂ), ಉಡುಪಿ, ದೂರವಾಣಿ: 0820-2531950, ಹಿರಿಯ ಸಹಾಯಕ ತೋಟ ಗಾರಿಕೆ ನಿರ್ದೇಶಕರು,(ಜಿ.ಪಂ), ಉಡುಪಿ ದೂರವಾಣಿ: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿ.ಪಂ), ಕುಂದಾಪುರ ದೂರವಾಣಿ: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,(ಜಿ.ಪಂ), ಕಾರ್ಕಳ ದೂರವಾಣಿ: 08258-230288ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.