ಕಾಂಗ್ರೆಸ್ ಸೇರಲು ಅಲ್ಪೇಶ್ ಠಾಕೂರ್ ಸಿದ್ಧತೆ
ಹೊಸದಿಲ್ಲಿ, ಆ. 22: ಗುಜರಾತ್ನಲ್ಲಿ ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ನಾಯಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಜೊತೆ ಕೈ ಜೋಡಿಸಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಸಭೆ ನಡೆಸಿದ ಬಳಿಕ ಅವರು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.
“23ರಂದು ನಡೆಯಲಿರುವ ಕಾಂಗ್ರೆಸ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುವರು, ಈ ಸಂದರ್ಭ ನಾನು ಹಾಗೂ ನನ್ನ ಬೆಂಬಲಿಗರು ಔಪಚಾರಿಕವಾಗಿ ಕಾಂಗ್ರೆಸ್ ಸೇರಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ರಾಜ್ಯ ರಾಜಕೀಯದ ಯುವ ನಾಯಕರಾದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ ಹಾಗೂ ಹಾರ್ದಿಕ್ ಪಟೇಲ್ ಅವರನ್ನು ಪಕ್ಷ ಸೇರುವಂತೆ ಗುಜರಾತ್ ಕಾಂಗ್ರೆಸ್ ವರಿಷ್ಠ ಭರತ್ಸಿನ್ಹಾ ಸೋಲಂಕಿ ಆಹ್ವಾನಿಸಿದ ಬಳಿಕ ಠಾಕೂರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಕ್ಟೋಬರ್ 23ರಂದು ನಡೆಯಲಿರುವ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ನಾನು ಕಾಂಗ್ರೆಸ್ ಸೇರಲಿದ್ದೇನೆ. ಗುಜರಾತ್ ಸರಕಾರದ ಆಡಳಿತದಿಂದ ಬಡವರು, ಹಿಂದುಳಿದವರು ಸಮಸ್ಯೆ ಹಾಗೂ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.
ಕೇಂದ್ರ ಸರಕಾರ ತನ್ನ ಆಡಳಿತವನ್ನು ಗುಜರಾತ್ ಮಾದರಿ ಎಂದು ಹೇಳುತ್ತಿದೆ. ಗುಜರಾತ್ನಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ 7 ಲಕ್ಷ. 47 ಸಾವಿರ ರೈತರು ಸಾಲದಲ್ಲಿ ಮುಳುಗಿದ್ದಾರೆ. ಮದ್ಯ ನಿಷೇಧ ವಿಧಿಸಿದ್ದರೂ ಮದ್ಯಸೇವಿಸಿ ಪ್ರತಿವರ್ಷ 10 ಸಾವಿರದಿಂದ 15 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಸರಕಾರದ ಶಿಕ್ಷಣ ವ್ಯವಸ್ಥೆ ಕುಸಿದಿದೆ ಎಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ.