ಗಾಂಧಿ, ನೆಹರೂ ಅವರನ್ನು ಕಸಕ್ಕೆ ಹೋಲಿಸಿದ ಅಸ್ಸಾಂ ಸಂಸದ
ಗುವಾಹತಿ, ಆ. 22: ಮಹಾತ್ಮಾ ಗಾಂಧಿ, ಜವಾಹರ್ಲಾಲ್ ನೆಹರೂ, ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರನ್ನು ಕಸಕ್ಕೆ ಹೋಲಿಸಿದ ಬಿಜೆಪಿಯ ಸಂಸದ ಕಾಮಕ್ಯ ಪ್ರಸಾದ್ ತಸ್ಸಾ ಅವರ ವಿರುದ್ಧ ಕಾಂಗ್ರೆಸ್ನ ಅಸ್ಸಾಂ ಘಟಕ ಶನಿವಾರ ಪೊಲೀಸ್ ದೂರು ದಾಖಲಿಸಿದೆ.
ಮಾನಹಾನಿಕರವಾಗಿ ಹೋಲಿಕೆ ಮಾಡಿದ ಕೇಂದ್ರ ಅಸ್ಸಾಂನ ಜೊರ್ಹಾತ್ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಿರುವ ಬುಡಕಟ್ಟು ಸಮುದಾಯದ ನಾಯಕನನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
“ದೀನ್ದಯಾಳ್ ಉಪಾಧ್ಯಾಯರಂತಹ ಸಿದ್ಧಾಂತಿಗಳ ಬಗ್ಗೆ ಅರಿಯದೆ, ಗಾಂಧಿ, ನೆಹೂರು ಅವರಂತಹ ಕಸಗಳ ಬಗೆಗಿನ ವಿಚಾರಗಳನ್ನು ಕಾಂಗ್ರೆಸ್ ಜನರ ತಲೆಗೆ ತುಂಬುತ್ತಿದೆ” ಎಂದು ಶನಿವಾರ ಸಾರ್ವಜನಿಕ ರ್ಯಾಲಿಯೊಂದರಲ್ಲಿ ತಸ್ಸಾ ಹೇಳಿದ್ದರು.
ಈ ರ್ಯಾಲಿಯಲ್ಲಿ ಮುಖ್ಯಮಂತ್ರಿ ಸರಬಾನಂದ ಸೋನೊ ವಾಲ್ ಕೂಡ ಪಾಲ್ಗೊಂಡಿದ್ದರು. ಈ ಹೋಲಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಗುವಾಹತಿಯಲ್ಲಿ ತಸ್ಸಾ ಅವರ ಪ್ರತಿಕೃತಿ ದಹಿಸಿದ್ದಾರೆ ಹಾಗೂ ಅವರನ್ನು ಸಂಸತ್ತಿನಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಇದು ದೇಶಕ್ಕೆ ಮಾತ್ರ ಅವಮಾನವಲ್ಲ. ಸ್ವಾತಂತ್ರ್ಯ ಹೋರಾಟ, ನಮ್ಮ ಸಂವಿಧಾನಕ್ಕೆ ಮಾಡಿದ ಅವಮಾನ. ಅಲ್ಲದೆ ಇದು ಗಂಭೀರ ಅಪರಾಧ. ಪ್ರಜ್ಞಾವಂತ ಯಾವ ವ್ಯಕ್ತಿಯೂ ಇಂತಹ ಹೋಲಿಕೆ ಮಾಡಲಾರ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಿಪುನ್ ಬೋರಾ ಹೇಳಿದ್ದಾರೆ.