ಆಧಾರ್ ಜೋಡಣೆಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಟೆಲಿಕಾಂ: ವಕೀಲರಿಂದ ದಾವೆ
ಚೆನ್ನೈ, ಆ. 21: ಆಧಾರ್, ಗುರುತು ಹಾಗೂ ವಿಳಾಸ ಪುರಾವೆ ದೃಢೀಕರಣದ ಏಕೈಕ ಮಾರ್ಗ ಎಂದು ಟೆಲಿಕಾಂ ಡಿಪಾರ್ಟ್ಮೆಂಟ್ ಹಾಗೂ ಇತರ ಟೆಲಿಕಾಂ ಸೇವೆ ಪೂರೈಕೆದಾರರು ಸಾರ್ವಜನಿಕರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಪ್ರತಿ ಮೊಬೈಲ್ ಫೋನ್ ಚಂದಾದಾರರ ಗುರುತು ಹಾಗೂ ವಿಳಾಸ ಪರಿಶೀಲನೆ ಕೋರಿ ಸರಕಾರೇತರ ಸಂಸ್ಥೆಯೊಂದು ದೂರು ಸಲ್ಲಿಸಿದ ಲೋಕನೀತಿ ಫೌಂಡೇಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ತಪ್ಪಾಗಿ ಹಾಗೂ ದುರುದ್ದೇಶದಿಂದ ವ್ಯಾಖ್ಯಾನಿಸಲಾಗಿದೆ ಎಂದು ವಕೀಲ ರಾಘವ ಟಂಕಾ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಆದೇಶದ ನಿಜವಾದ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಜಾಹೀರಾತು ಹಾಗೂ ಎಸ್ಎಂಎಸ್ ಮೂಲಕ ತಪ್ಪು ಮಾಹಿತಿ ನೀಡುವ ಟೆಲಿಕಾಂ ಸೇವೆ ಪೂರೈಕೆದಾರರಿಗೆ ನಿರ್ದೇಶನ ನೀಡುವಂತೆ ಕೂಡ ಟಂಕಾ ದಾವೆಯಲ್ಲಿ ಹೇಳಿದ್ದಾರೆ.
ಹೊಸ ಮೊಬೈಲ್ ಸಂಪರ್ಕ ಹಾಗೂ ಈಗಿರುವ ಬಳಕೆದಾರರನ್ನು ಮರು ಪರಿಶೀಲಿಸಲು ಆಧಾರ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದು ಟೆಲಿಕಮ್ಯೂನಿಕೇಶನ್ ವಿಭಾಗ ಈ ವರ್ಷದ ಮಾರ್ಚ್ 23ರ ಸುತ್ತೋಲೆಯಲ್ಲಿ ತಿಳಿಸಿತ್ತು. ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರು ಫೋನ್ ನಂಬರ್ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯ ಎಂದು ಅದು ಹೇಳಿತ್ತು.