ಮಾನಹಾನಿ ಪ್ರಕರಣ: ಕಪಿಲ್ ಮಿಶ್ರಾಗೆ ಸಮನ್ಸ್
ಹೊಸದಿಲ್ಲಿ,ಅ.31: ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಅವರ ಮಾನಹಾನಿಯನ್ನುಂಟು ಮಾಡಿದ್ದ ಪ್ರಕರಣದಲ್ಲಿ ವಜಾಗೊಂಡಿರುವ ಸಚಿವ ಕಪಿಲ್ ಮಿಶ್ರಾ ಅವರನ್ನು ಆರೋಪಿಯನ್ನಾಗಿಸಿ ಇಲ್ಲಿಯ ಮಹಾನಗರ ನ್ಯಾಯಾಲಯವು ಮಂಗಳವಾರ ಸಮನ್ಸ್ ಹೊರಡಿಸಿದ್ದು, ಮುಂದಿನ ವರ್ಷದ ಜ.20ರಂದು ತನ್ನೆದುರು ಹಾಜರಾಗುವಂತೆ ನಿರ್ದೇಶ ನೀಡಿದೆ.
ಮಿಶ್ರಾ ಮಾಧ್ಯಮಗಳಲ್ಲಿ ತನ್ನ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ಜೈನ್ ಅವರು ಕ್ರಿಮಿನಲ್ ದೂರನ್ನು ಸಲ್ಲಿಸಿದ್ದರು. ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ವಿರುದ್ಧವೂ ಅವರು ಮಾನಹಾನಿ ದೂರನ್ನು ದಾಖಲಿಸಿದ್ದರು. ಮಾನಹಾನಿ ಪ್ರಕರಣದಲ್ಲಿ ಆರೋಪ ರುಜುವಾತಾದರೆ ಗರಿಷ್ಠ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ.
ಕಾರವಲ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಿಶ್ರಾ ಕೇಜ್ರಿವಾಲ್ ಮತ್ತು ಜೈನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ ಬಳಿಕ ಅವರನ್ನು ಆಪ್ನಿಂದ ಅಮಾನತುಗೊಳಿಸಲಾಗಿತ್ತು.
Next Story