ಜಯ್ ಶಾ ಪ್ರಕರಣ: ಕೆಳನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಗೆ ಹೈಕೋರ್ಟ್ ನಕಾರ
ಅಹ್ಮದಾಬಾದ್, ನ.2: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಸಂಸ್ಥೆಯ ವಿರುದ್ಧ ‘ದಿ ವೈರ್’ ಯಾವುದೇ ಲೇಖನ ಪ್ರಕಟಿಸಬಾರದು ಎಂಬ ಕೆಳ ನ್ಯಾಯಾಲಯದ ಏಕಪಕ್ಷೀಯ ಆದೇಶಕ್ಕೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.
ಕಳೆದ ತಿಂಗಳು ಜಯ್ ಶಾರ ಅಪೀಲನ್ನು ಎತ್ತಿಹಿಡಿದಿದ್ದ ಅಹ್ಮದಾಬಾದ್ ನ್ಯಾಯಾಲಯ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ‘ದಿ ವೈರ್’ ಮಾಧ್ಯಮ ಗುಜರಾತ್ ಹೈಕೋರ್ಟ್ಗೆ ಅಪೀಲು ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಸಂದರ್ಭ ವಾದ ಮಂಡಿಸಿದ ‘ದಿ ವೈರ್’ ಪರ ವಕೀಲ ದುಷ್ಯಂತ್ ದವೆ , ಮಾಧ್ಯಮದಲ್ಲಿ ಪ್ರಕಟವಾದ ಜಯ್ ಶಾ ಕುರಿತ ಲೇಖನ ವಾಸ್ತವಾಂಶ ಮತ್ತು ಅಧಿಕೃತ ದಾಖಲೆ ಆಧಾರಿತವಾಗಿದ್ದು ಮಾನಹಾನಿಯ ಅಂಶವನ್ನು ಹೊಂದಿಲ್ಲ ಎಂದು ತಿಳಿಸಿದರು. ಬಳಿಕ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಜಯ್ ಶಾಗೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ವಿಚಾರಣೆಯನ್ನು ಎರಡು ವಾರ ಮುಂದೂಡಿತು.
ಜಯ್ ಶಾ ನೇತೃತ್ವದ ಸಂಸ್ಥೆಯ ವಹಿವಾಟು 2014ರ ಬಳಿಕ ಭಾರೀ ಹೆಚ್ಚಳವಾಗಿದೆ ಎಂದು ‘ದಿ ವೈರ್’ನಲ್ಲಿ ಪ್ರಕಟವಾಗಿದ್ದ ಲೇಖನದ ಹಿನ್ನೆಲೆಯಲ್ಲಿ, ಆ ಪತ್ರಿಕೆಯ ವಿರುದ್ಧ ಜಯ್ ಶಾ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.