ದೇಶದ ಉದ್ಯಮ ಸ್ನೇಹಿ ಪರಿಸರವನ್ನು ಜಿಎಸ್ಟಿ ಸುಧಾರಿಸಲಿದೆ: ಪ್ರಧಾನಿ
ಹೊಸದಿಲ್ಲಿ, ನ. 1: ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಣಾಮ ಗಮನದಲ್ಲಿರಿಸಿದರೆ, ಮುಂದಿನ ವರ್ಷದಿಂದ ಭಾರತದಲ್ಲಿ ಉದ್ಯಮ ಸ್ನೇಹಿ ಪರಿಸರದ ಶ್ರೇಣಿ ಇನ್ನಷ್ಟು ಮೇಲೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ಇಂಡಿಯಾಸ್ ಬ್ಯುಸಿನಸ್ ರಿಫಾರ್ಮ್ಸ್ ಸಮಾವೇಶದಲ್ಲಿ ವಿಶ್ವ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಿಸ್ಟಾಲಿನಾ ಜೋರ್ಜಿವಾ ಹಾಗೂ ಇತರ ಗಣ್ಯರೊಂದಿಗೆ ಅವರು ಪಾಲ್ಗೊಂಡರು.ವಿಶ್ವ ಬ್ಯಾಂಕ್ನ ಇತ್ತೀಚೆಗಿನ ಉದ್ಯಮ ಸ್ನೇಹಿ ಪರಿಸರ ರಾಷ್ಟ್ರದ ಶ್ರೇಣಿಯಲ್ಲಿ ಭಾರತದ ಸ್ಥಾನ 30 ರಷ್ಟು ಏರಿಕೆಯಾಗಿತ್ತು.
ಭಾರತದ ಶ್ರೇಣಿ ಏರಿಕೆಯಾಗಿರುವ ಬಗ್ಗೆ ವಿರೋಧ ಪಕ್ಷಗಳ ನಾಯಕರು ಸಂಶಯ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ, ವಿಶ್ವ ಬ್ಯಾಂಕ್ನೊಂದಿಗೆ ಕಾರ್ಯ ನಿರ್ವಹಿಸಿದವರು ಇಂದು ಭಾರತದ ಶ್ರೇಣಿ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೇ ಅಂತ್ಯದ ವರೆಗಿನ ಸುಧಾರಣೆಯನ್ನು ಈ ಶ್ರೇಣಿಗೆ ಪರಿಗಣಿಸಲಾಗಿದೆ. ಜುಲೈ 1ರಂದು ಅನುಷ್ಠಾನಗೊಳಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಣಾಮ ಇದಕ್ಕೆ ಅನ್ವಯಿಸಲಾಗದು ಎಂದು ಪ್ರಧಾನಿ ಹೇಳಿದ್ದಾರೆ.
ಜಿಎಸ್ಟಿ ದೇಶದ 1.2 ಶತಕೋಟಿ ಜನರನ್ನು ಒಂದೇ ತೆರಿಗೆ ಇರುವ ಒಂದೇ ಮಾರುಕಟ್ಟೆ ಅಡಿಯಲ್ಲಿ ಮಾತ್ರ ತಂದಿಲ್ಲ. ಬದಲಾಗಿ ಸುಸ್ಥಿರ ಹಾಗೂ ಪಾರದರ್ಶಕ ತೆರಿಗೆ ವ್ಯವಸ್ಥೆ ನೀಡಿದೆ ಎಂದು ಪ್ರಧಾನಿ ಅವರು ಹೇಳಿದರು.