ಜಿಎಸ್ಟಿ ದರ ಶೇ.5ಕ್ಕಿಳಿದಿದೆ,ಆದರೆ ರೆಸ್ಟೋರೆಂಟ್ ಭೋಜನ ಅಗ್ಗವಾಗುವುದೇ?
ಹೊಸದಿಲ್ಲಿ,ನ.11: ಜಿಎಸ್ಟಿ ಮಂಡಳಿಯು ಆರಂಭದಲ್ಲಿ ನಿಗದಿಗೊಳಿಸಿದ್ದ ಎಸಿ ರೆಸ್ಟೋರೆಂಟ್ಗಳ ಶೇ.18 ಮತ್ತು ಎಸಿಯೇತರ ರೆಸ್ಟೋರೆಂಟ್ಗಳ ಶೇ.12 ತೆರಿಗೆಯನ್ನು ಶೇ.5ಕ್ಕೇನೋ ಇಳಿಸಿದೆ. ಇದು ಅವುಗಳಲ್ಲಿ ಬಿಲ್ ಮೊತ್ತವನ್ನು ಕಡಿಮೆಗೊಳಿಸಬಹುದಿತ್ತು. ಆದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ನೀಡಿಲ್ಲವಾದ್ದರಿಂದ ರೆಸ್ಟೋರೆಂಟ್ಗಳ ಮಾಲಕರು ಆಹಾರ ಬೆಲೆಗಳನ್ನು ಹೆಚ್ಚಿಸಬಹುದು ಎಂದು ಹಲವಾರು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೂತನ ಜಿಎಸ್ಟಿ ದರಗಳು ನ.15ರಿಂದ ಜಾರಿಗೊಳ್ಳಲಿವೆ. ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿರುವ ಮದ್ಯದ ಮೇಲೆ ವ್ಯಾಟ್ ಮುಂದುವರಿಯಲಿದೆ.
ಜಿಎಸ್ಟಿಯ ಬಳಿಕ ರೆಸ್ಟೋರೆಂಟ್ಗಳಲ್ಲಿ ಊಟ-ತಿಂಡಿ ತುಂಬ ದುಬಾರಿಯಾಗಿವೆ. ಅಗ್ಗದ ದರಗಳ ರೆಸ್ಟೋರೆಂಟ್ಗಳಲ್ಲಿಯೂ ಹೆಚ್ಚು ಹಣ ನೀಡುವಂತಾಗಿದೆ. ಪ್ರತಿ ವ್ಯಕ್ತಿಗೆ 500 ರೂ.ಬಿಲ್ ಆಗಬಹುದೆಂದು ಎಣಿಸಿ ರೆಸ್ಟೋರೆಂಟ್ಗೆ ತೆರಳಿದರೆ ಅಂತ್ಯದಲ್ಲಿ ಸೇವಾತೆರಿಗೆ ಮತ್ತು ತೆರಿಗೆಗಳು ಸೇರಿ 700 ರೂ.ಕಕ್ಕುವಂತಾಗಿದೆ ಎಂದು ದಿಲ್ಲಿಯ ತೆರಿಗೆ ಸಲಹೆಗಾರರಾದ ತನುಶ್ರೀ ಸರ್ಕಾರ್ ಹೇಳಿದರು.
ತೆರಿಗೆ ದರಗಳ ಕಡಿತವನ್ನು ಸ್ವಾಗತಿಸಿರುವ ದಿಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲಿಕರ ಸಂಘದ ಅಧ್ಯಕ್ಷ ಸಂದೀಪ ಖಂಡೇಲವಾಲ್ ಅವರು, ಜನರು ಈಗ ತೆರಿಗೆ ವಂಚನೆಗೆ ಪ್ರಯತ್ನಿಸುವುದಿಲ್ಲ. ಅದು ಎಷ್ಟೊಂದು ಕಡಿಮೆಯಾಗಿದೆಯೆಂದರೆ ತೆರಿಗೆ ತಪ್ಪಿಸಲು ಲಂಚ ನೀಡುವುದಕ್ಕಿಂತ ತೆರಿಗೆಯನ್ನು ಪಾವತಿಸುವುದೇ ಅಗ್ಗವಾಗುತ್ತದೆ ಎಂದು ಹೇಳಿದರು.
ಆದರೆ ರೆಸ್ಟೋರೆಂಟ್ಗಳಿಗೆ ಐಟಿಸಿ ವಾಪಸ್ ಸಿಗುವುದಿಲ್ಲವಾದ್ದರಿಂದ ಆಹಾರ ಬೆಲೆಗಳು ಕನಿಷ್ಠ ಶೇ.10ರಷ್ಟು ಏರಿಕೆಯಾಗಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.
ಐಟಿಸಿಯನ್ನು ನಿರಾಕರಿಸಿರುವುದು ಜಿಎಸ್ಟಿ ಕಡಿತದ ಲಾಭವನ್ನು ಕಿತ್ತುಕೊಳ್ಳಲಿದೆ. ಅದು ವೆಚ್ಚಗಳನ್ನು ಶೇ.10ರಷ್ಟು ಹೆಚ್ಚಿಸಲಿದ್ದು, ಇದು ಆಹಾರದ ಬೆಲೆಗಳಲ್ಲಿ ಸೇರಿಕೊಳ್ಳಲಿದೆ. ಹೀಗಾಗಿ ಅಂತ್ಯದಲ್ಲಿ ಬಳಕೆದಾರನಿಗೆ ಹೆಚ್ಚಿನ ಲಾಭವೇನೂ ದೊರೆಯುವುದಿಲ್ಲ ಎಂದು ಬಿಯರ್ ಕೆಫೆಯ ಸ್ಥಾಪಕ ಹಾಗೂ ಸಿಇಒ ರಾಹುಲ್ ಸಿಂಗ್ ಹೇಳಿದರು.