ಚಳಿಗಾಲದ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ವಿಧೇಯಕ ಮರುಮಂಡನೆ
ಹೊಸದಿಲ್ಲಿ,ನ.22: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವೊಂದನ್ನು ಮತ್ತೊಮ್ಮೆ ಮಂಡಿಸಲಿದೆ.
ಕೇಂದ್ರ ಸರಕಾರದ ಈ ನಡೆಯು, ಎನ್ಸಿಬಿಸಿಯನ್ನು ಇತರ ಹಿಂದುಳಿದ ವರ್ಗ(ಓಬಿಸಿ)ಗಳ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಣೆಗೆ ಸಂಪೂರ್ಣ ಅಧಿಕಾರವನ್ನು ಹೊಂದಿರುವ ಒಂದು ಸಾಂವಿಧಾನಿಕ ಸಂಸ್ಥೆಯಾಗಿ ರೂಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಹಿಂದುಳಿದ ವರ್ಗಗಳಿಗೆ ಸಮಾನತೆಯನ್ನು ಖಾತರಿಪಡಿಸುವ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಹಾಗೂ ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲು ನಿರ್ಧ ರಿಸಿದೆ’’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತಾವಿತ ಮಸೂದೆಯು, ಓಬಿಸಿ ಮತಗಳನ್ನು ತನ್ನೆಡೆಗೆ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಕೈಗೊಂಡಿರುವ ಮಹತ್ವದ ಪ್ರಯತ್ನವೆಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ. ಎನ್ಸಿಬಿಸಿಗೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂಬ ಓಬಿಸಿ ಸಮುದಾಯಗಳ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರಕಾರವು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಆಯೋಗಕ್ಕೆ ಸರಿಸಮವಾದ ಸಂವಿಧಾನಿಕ ಸ್ಥಾನಮಾನವನ್ನು ನೀಡುವುದಕ್ಕಾಗಿ ಕಳೆದ ಸಂಸತ್ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮಂಡಿಸಿತ್ತು.
ಬಾಕ್ಸ್
ಆಯೋಗಕ್ಕೆ ದೊರೆಯಲಿದೆ ಹೆಚ್ಚಿನ ಅಧಿಕಾರ
ಪ್ರಸ್ತಾವಿತ ರಾಷ್ಟ್ರೀಯ ಹಿಂದುಳಿದ ವರ್ಗಗಳ ವಿಧೇಯಕವು ಕಳೆದ ಸಲದ ಸಂಸತ್ ಅಧಿವೇಶನದಲ್ಲಿ ೆ ಲೋಕಸಭೆಯಲ್ಲಿ ಮಂಡಿಸಲ್ಪಟ್ಟು, ಅಂಗೀಕಾರಗೊಂಡಿತ್ತು. ಆನಂತರ ರಾಜ್ಯಸಭೆಯು ಕೆಲವೊಂದು ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಅಂಗೀಕರಿಸಿತ್ತು. ಹೀಗಾಗಿ ಸಂಸತ್ನ ಎರಡೂ ಸದನಗಳಲ್ಲಿ ವಿಧೇಯಕದ ಎರಡು ವಿಭಿನ್ನ ಆವೃತ್ತಿಗಳು ಮಂಡಿಸಲ್ಪಟ್ಟಿದ್ದವು.
ರಾಜ್ಯಸಭೆಯಲ್ಲಿ ವಿಧೇಯಕವು ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡಿದ್ದರಿಂದ ಅದು ಈಗ ಲೋಕಸಭೆಯಲ್ಲಿ ಮರುಮಂಡನೆಯಾಗಬೇಕಾಗಿದೆ. 1993ರಲ್ಲಿ ರಚನೆಯಾದ ಎನ್ಸಿಬಿಸಿಗೆ ಈತನಕ ಸೀಮಿತವಾದ ಅಧಿಕಾರಗಳನ್ನು ನೀಡಲಾಗಿತ್ತು. ಕೇಂದ್ರದ ಒಬಿಸಿ ಪಟ್ಟಿಯಿಂದ ಒಂದು ಸಮುದಾಯವನ್ನು ಸೇರ್ಪಡೆಗೊಳಿಸುವ ಅಥವಾ ತೆಗೆದುಹಾಕುವುದನ್ನು ಶಿಫಾರಸು ಮಾಡುವುದಕ್ಕಷ್ಟೇ ಅದರ ಅಧಿಕಾರ ಸೀಮಿತವಾಗಿತ್ತು.
ಒಬಿಸಿಗಳ ಅಹವಾಲುಗಳನ್ನು ಅಲಿಸುವ ಹಾಗೂ ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರವು ಪರಿಶಿಷ್ಟ ಜಾತಿಗಳ ಆಯೋಗದ ಬಳಿಯೇ ಉಳಿಸಿಕೊಳ್ಳಲಾಗಿತ್ತು.ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಎಸ್ಸಿಗಳು ಹಾಗೂ ಒಬಿಸಿಗಳೆರಡ ಅಹವಾ ಲುಗಳನ್ನು ಹಾಗೂ ಹಿತರಕ್ಷಣೆಗಳ ಕುರಿತಾಗಿ ವ್ಯವಹರಿಸಬೇಕಾಗಿರುವುದರಿಂದ, ಒಬಿಸಿಗಳ ಅಗತ್ಯಗಳಿಗೆ ಸ್ಪಂದಿಸುವ ಅದರ ಸಾಮರ್ಥ್ಯವು ಸೀಮಿತಗೊಂಡಿದೆಯೆಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.