ಏರುಧ್ವನಿಯಲ್ಲಿ ಮಾತನಾಡಬೇಡಿ: ಹಿರಿಯ ವಕೀಲರಿಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಡಿ.8: ಕೋರ್ಟ್ನಲ್ಲಿ ವಾದ ಮಂಡನೆಯ ಸಂದರ್ಭ ಏರುಧ್ವನಿಯಲ್ಲಿ ಮಾತನಾಡಿ ನ್ಯಾಯಾಧೀಶರನ್ನು ಬೆದರಿಸಲು ಪ್ರಯತ್ನಿಸುವ ಕೆಲವು ಹಿರಿಯ ವಕೀಲರ ವರ್ತನೆಯ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ಸೂಚಿಸಿದೆ.
ಕೋರ್ಟ್ನಲ್ಲಿ ಬೊಬ್ಬೆ ಹೊಡೆಯುವುದನ್ನು ಇನ್ನು ಮುಂದೆ ಸಹಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ನ್ಯಾಯಪೀಠ ಎಚ್ಚರಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ನಲ್ಲಿ ರಾಮಮಂದಿರ-ಬಾಬರಿ ಮಸೀದಿ ಪ್ರಕರಣ ಹಾಗೂ ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರ (ಲೆಫ್ಟಿನೆಂಟ್ ಗವರ್ನರ್ ಅಧಿಕಾರ ವ್ಯಾಪ್ತಿ) ಪ್ರಕರಣದ ವಿಚಾರಣೆ ಸಂದರ್ಭ ಕೆಲವು ಹಿರಿಯ ವಕೀಲರ ವರ್ತನೆಯನ್ನು ಖಂಡಿಸಿ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರದ ಪ್ರಕರಣದ ವಿಚಾರಣೆ ಸಂದರ್ಭ ನಡೆದಿರುವ ಘಟನೆ ಅಸಹ್ಯವಾಗಿದೆ. ಇದಕ್ಕೂ ಮುಂಚಿನ ದಿನ ನಡೆದ ಅಯೋಧ್ಯೆ ಪ್ರಕರಣದ ವಿಚಾರಣೆ ಸಂದರ್ಭ ಇನ್ನಷ್ಟು ಅಸಹ್ಯಕರ ಘಟನೆ ನಡೆದಿದೆ ಎಂದು ನ್ಯಾಯಪೀಠ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ವಕೀಲರು ವಾದಮಂಡನೆಯ ಸಂದರ್ಭ ಏರುಧ್ವನಿಯಲ್ಲಿ ಮಾತನಾಡುವ ಪ್ರಕರಣ ಹೆಚ್ಚುತ್ತಿದ್ದು, ವಕೀಲರು ಸಂಯಮ ವಹಿಸಬೇಕು ಮತ್ತು ನ್ಯಾಯಾಲಯಕ್ಕೆ ಗೌರವ ನೀಡಬೇಕು ಎಂದು ವಿಷಯ ಪ್ರಸ್ತಾವಿಸಿದ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಮ್ ಹೇಳಿದರು. ವಕೀಲರು ವಾದ ಮಂಡಿಸುವ ಸಂದರ್ಭ ಅಸಾಂವಿಧಾನಿಕ ಪದ ಬಳಸುವುದನ್ನು ಎಷ್ಟು ಸಮಯ ಸಹಿಸಲು ಸಾಧ್ಯ. ವಕೀಲರು ತಮ್ಮ ವರ್ತನೆಯನ್ನು ಸ್ವಯಂನಿಯಂತ್ರಿಸಿಕೊಳ್ಳದಿದ್ದರೆ ನಾವು ಅನಿವಾರ್ಯವಾಗಿ ಅದನ್ನು ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರ ಹೇಳಿದರು.
ವಕೀಲರನ್ನು ನ್ಯಾಯಸ್ಥಾನದ ಸಚಿವರು ಎಂದೇ ಸಾಂಪ್ರದಾಯಿಕವಾಗಿ ಕರೆಯಲಾಗುತ್ತದೆ. ಆದರೆ ದುರದೃಷ್ಟವಶಾತ್ , ಹಿರಿಯ ವಕೀಲರ ಸಣ್ಣ ಗುಂಪೊಂದು ತಾವು ಧ್ವನಿ ಎತ್ತರಿಸಿ ಮಾತನಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಬೊಬ್ಬೆ ಹೊಡೆದು ಮಾತನಾಡುವುದರಿಂದ ಅವರು ತಮ್ಮ ದೌರ್ಬಲ್ಯ, ಅದಕ್ಷತೆಯನ್ನು ಹೊರಗೆಡಹಿದಂತಾಗುತ್ತದೆ ಮತ್ತು ಅವರು ಹಿರಿಯರಾಗಿರಲು ಯೋಗ್ಯರಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಮಿಶ್ರ ಕಟುಶಬ್ಧಗಳಲ್ಲಿ ಹೇಳಿದರು.
ಮಂಗಳವಾರ ಅಯೋಧ್ಯೆ ಪ್ರಕರಣದ ವಿಚಾರಣೆ ಸಂದರ್ಭ ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ಹಾಗೂ ದುಷ್ಯಂತ ದವೆ ಏರು ಧ್ವನಿಯಲ್ಲಿ ಮಾತನಾಡುತ್ತಾ ವಾದ ಮಂಡಿಸಿದ್ದರಲ್ಲದೆ, ನ್ಯಾಯಾಲಯದಿಂದ ಹೊರಗೆ ಹೋಗುವ ಬೆದರಿಕೆಯನ್ನೂ ಹಾಕಿದ್ದರು.