ಇಟಲಿಯಲ್ಲಿ ಮದುವೆಯಾದ ವಿರಾಟ್ ಕೊಹ್ಲಿ ದೇಶಭಕ್ತನಲ್ಲ ಎಂದ ಬಿಜೆಪಿ ಶಾಸಕ!
“ರಾಮ, ಕೃಷ್ಣರು ಮದುವೆಯಾದದ್ದು ಭಾರತದಲ್ಲಿ”
ಮಧ್ಯಪ್ರದೇಶ, ಡಿ.19: ತನ್ನ ಮದುವೆ ಸಮಾರಂಭಕ್ಕಾಗಿ ಇಟಲಿಯನ್ನು ಆಯ್ದುಕೊಂಡ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೇಶಭಕ್ತನಲ್ಲ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿದ್ದು, ವಿವಾದವನ್ನು ಸೃಷ್ಟಿಸಿದೆ.
“ವಿರಾಟ್ ಭಾರತದಲ್ಲೇ ಹಣ ಹಾಗು ಖ್ಯಾತಿಯನ್ನು ಗಳಿಸಿದರು. ಆದರೆ ಮದುವೆಯಾಗುವುದಕ್ಕಾಗಿ ಇಟಲಿಗೆ ಹೋಗಿದ್ದಾರೆ. ಭಗವಾನ್ ರಾಮ ಈ ದೇಶದಲ್ಲೇ ಮದುವೆಯಾದ, ಭಗವಾನ್ ಕೃಷ್ಣನೂ ಇಲ್ಲೇ ಮದುವೆಯಾದ. ಆದರೆ ಈ ವ್ಯಕ್ತಿ ಮದುವೆಯಾಗಲು ಇಟಲಿಗೆ ಹೋಗಿದ್ದಾರೆ. ಕೊಹ್ಲಿ ರಾಷ್ಟ್ರಭಕ್ತನಲ್ಲ” ಎಂದು ಗುನಾದ ಬಿಜೆಪಿ ಶಾಸಕ ಪನ್ನಾ ಲಾ ಶಕ್ಯಾ ಹೇಳಿದ್ದಾರೆ ಎಂದು indiatoday.intoday.in ವರದಿ ಮಾಡಿದೆ,
ಭಾರತೀಯರಿಗೆ ಕೊಹ್ಲಿ ಸ್ಫೂರ್ತಿಯಾಗುವುದಿಲ್ಲ. ದೇಶಕ್ಕೆ ನಿಷ್ಠರಾಗಿರುವವರು ಮಾತ್ರ ಭಾರತೀಯರಿಗೆ ಸ್ಫೂರ್ತಿಯಾಗಿರುತ್ತಾರೆ. ಅನುಷ್ಕಾ ಶರ್ಮಾ ಬಗ್ಗೆಯೂ ತಾನು ಇದೇ ಅಭಿಪ್ರಾಯ ಹೊಂದಿದ್ದೇನೆ ಎಂದವರು ಹೇಳಿದರು,
ಪ್ರಧಾನಿ ನರೇಂದ್ರ ಮೋದಿಯವರ ಸ್ಕಿಲ್ ಇಂಡಿಯಾ ಸೆಂಟರನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಹ್ಲಿ ದೇಶದ ಸಂಪತ್ತನ್ನು ಹೊರದೇಶಕ್ಕೆ ಕೊಂಡೊಯ್ದಿದ್ದರೆ ಭಾರತದಲ್ಲಿ ಇಟಲಿಯ ಡ್ಯಾನ್ಸರ್ ಗಳು ಕೋಟ್ಯಾಧಿಪತಿಗಳಾಗಿದ್ದಾರೆ ಎಂದರು.
ಬಿಜೆಪಿ ಶಾಸಕನ ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. “ಗುಜರಾತ್ ನಿಂದ ಬಂದ ಸಂದೇಶ ಸ್ಪಷ್ಟವಾಗಿದೆ. ರಾಷ್ಟ್ರಭಕ್ತಿಯ ವಿಷಯ ಕೆದಕದೆ ಮಧ್ಯ ಪ್ರದೇಶದಲ್ಲಿ ನೆಲೆ ನಿಲ್ಲುವುದು ಕಷ್ಟ ಸಾಧ್ಯ ಎನ್ನುವುದು ಸ್ಪಷ್ಟವಾಗಿದೆ” ಎಂದು ಕಾಂಗ್ರೆಸ್ ಹೇಳಿದೆ.