50 ಸಾವಿರ ಆಧಾರ್ ನೋಂದಣಿ ನಿರ್ವಾಹಕರು ಅಮಾನತು
ಹೊಸದಿಲ್ಲಿ, ಡಿ. 29: ಆಧಾರ್ ನೋಂದಣಿ ಮಾರ್ಗಸೂಚಿ ಪ್ರಕ್ರಿಯೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇದುವರೆಗೆ ಸುಮಾರು 50 ಸಾವಿರ ನೋಂದಣಿ ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಲಾಯಿತು.
ಆಧಾರ್ ನೋಂದಣಿ ಸಂದರ್ಭ ತಪ್ಪಿನ ನಿರ್ದಿಷ್ಟ ಮಿತಿ ಮೀರಿದ ನಿರ್ವಾಹಕರನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆಯ ಸಹಾಯಕ ಸಚಿವ ಅಲ್ಫೋನ್ಸ್ ಕನ್ನಂತಾನಮ್ ಲಿಖತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಗುಣಮಟ್ಟ ಪರೀಕ್ಷೆ ಸಂದರ್ಭ ದೋಷಪೂರಿತ ನೋಂದಣಿಗಳನ್ನು ತಿರಸ್ಕರಿಸಲಾಗಿದೆ. ಇಂತಹ ನೋಂದಣಿಗೆ ಆಧಾರ್ ಕಾರ್ಡ್ ನೀಡಿಲ್ಲ. ದೋಷ ರಹಿತ ನೋಂದಣಿ ಮಾತ್ರ ಅರ್ಹ. ಅಂತಹ ನೋಂದಣಿಗೆ ಮಾತ್ರ ಆಧಾರ್ ಕಾರ್ಡ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆಧಾರ್ ನೋಂದಣಿಗೆ ಸಂಬಂಧಿಸಿದ ಮಾರ್ಗಸೂಚಿ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ 50 ಸಾವಿರ ಆಧಾರ್ ನೋಂದಣಿ ನಿರ್ವಾಹಕರನ್ನು ಇದುವರೆಗೆ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿವಿಧ ವಿಷಯದ ಕುರಿತು ನೋಂದಣಿ ಮಾಡುವ ಕಾರ್ಯವನ್ನು ತನ್ನ ಅಡಿಯಲ್ಲಿ ನಿರ್ವಹಿಸುವ ನಿರ್ವಾಹಕರು ಹಾಗೂ ನೋಂದಣಿ ಏಜೆನ್ಸಿಗೆ ಆಧಾರ್ ನೀಡುವ ಸಂಸ್ಥೆ (ಯುಐಡಿಎಐ) ನಿರಂತರ ತರಬೇತಿ ಹಾಗೂ ಜಾಗೃತಿ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಎಂದು ಕನ್ನಂತಾನಮ್ ತಿಳಿಸಿದ್ದಾರೆ.