ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಚ್ಚಿದ ಆಕ್ರೋಶಿತ ಗುಂಪು
ಕಸ್ಟಡಿಯಲ್ಲಿದ್ದ ಆರೋಪಿಯ ಸಾವು
ಭುವನೇಶ್ವರ, ಫೆ. 9: ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಬುಡಕಟ್ಟು ವ್ಯಕ್ತಿಯೋರ್ವನ ಶವ ಪೊಲೀಸ್ ಕಸ್ಟಡಿಯಲ್ಲಿ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಉದ್ರಿಕ್ತ ಗುಂಪೊಂದು ಶುಕ್ರವಾರ ಪಶ್ಚಿಮ ಒರಿಸ್ಸಾದ ಸಾಂಬಾಲ್ಪುರ ಪೊಲೀಸ್ ಠಾಣೆ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿತು ಹಾಗೂ ಪೊಲೀಸ್ ಸಿಬ್ಬಂದಿಗೆ ಥಳಿಸಿತು.
ಕಬ್ಬಿಣದ ಸಲಾಕೆ ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡಿದ್ದ ಮಹಿಳೆಯರೂ ಸೇರಿದಂತೆ ನೂರಾರು ಸ್ಥಳೀಯ ನಿವಾಸಿಗಳು ಐಂಥಪಾಲಿ ಪೊಲೀಸ್ ಠಾಣೆ ಪ್ರವೇಶಿಸಿ ದಾಂಧಲೆ ನಡೆಸಿದರು ಹಾಗೂ ಹಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮೊದಲು ಅವರು ಪೊಲೀಸರತ್ತ ಕಲ್ಲುಗಳನ್ನೆಸೆದರು.
ಈ ದಾಳಿಯಿಂದ ಕನಿಷ್ಠ 7 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಠಾಣೆಗೆ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ವ್ಯಕ್ತಿಯ ಕಸ್ಟಡಿ ಸಾವಿನ ಬಗ್ಗೆ ತನಿಖೆ ನಡೆಸಲು ಸಾಂಬಾಲ್ಪುರದ ಪೊಲೀಸ್ ಅಧೀಕ್ಷಕ ಸಂಜೀವ್ ಅರೋರಾ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ತಂಡ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳವು ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಭಲುಪಾಲಿ ಗ್ರಾಮದ ಅಭಿನಾಶ್ ಮುಂಡಾ ಶವ ಐಂಥಪಾಲಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಈ ಘಟನೆ ನಡೆದಿದೆ.